ADVERTISEMENT

ವಿವಿಧ ಕಾಮಗಾರಿಗಳಿಗೆ ಶಾಸಕ ಕೋನರಡ್ಡಿ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 9:50 IST
Last Updated 15 ಮಾರ್ಚ್ 2018, 9:50 IST

ನವಲಗುಂದ: ತಾಲ್ಲೂಕಿನ ಚಿಲಕವಾಡ, ಶಿಶ್ವಿನಹಳ್ಳಿ, ಮಣಕವಾಡ ಹಾಗೂ ಇಂಗಳಹಳ್ಳಿ ಗ್ರಾಮಗಳಲ್ಲಿ ಸುಮಾರು ₹10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್.ಎಚ್. ಕೋನರಡ್ಡಿ ಬುಧವಾರ ಚಾಲನೆ ನೀಡಿದರು.

ಚಿಲಕವಾಡ ಗ್ರಾಮದ ಪರಿಶಿಷ್ಟ ಜಾತಿಯ ಕಾಲೊನಿಯಲ್ಲಿ ₹49 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಎಚ್.ಕೆ.ಮತ್ತು ಜಿ.ಕೆ.ಕೋನರಡ್ಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂದುವರೆದ ಕಟ್ಟಡದ ಕಾಮಗಾರಿಯ ಉದ್ಘಾಟನೆಯನ್ನು ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಪರಿಶಿಷ್ಟ ಜಾತಿಯ ಜನಾಂಗದವರ ಬಹುದಿನಗಳ ಕನಸಾಗಿದ್ದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ನೂತನ ಕೊಠಡಿಗಳ ಅವಶ್ಯಕತೆ ಎಂಬುದನ್ನು ಮನಗಂಡು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಕೊಠಡಿಗಳ ಉದ್ಘಾಟನೆ ಮಾಡಿದ್ದೇನೆ’ ಎಂದು ಹೇಳಿದರು.

ADVERTISEMENT

ನಂತರ ಶಿಶ್ವಿನಹಳ್ಳಿ ಗ್ರಾಮಕ್ಕೆ ತೆರಳಿದ ಅವರು ‘ಇಂಗಳಹಳ್ಳಿ ಹಾಗೂ ಶಿಶ್ವಿನಹಳ್ಳಿ ಮಧ್ಯದಲ್ಲಿರುವ ಯರನಾಳ ಹಳ್ಳಕ್ಕೆ ಸೇತುವೆ ಇಲ್ಲದ್ದರಿಂದ ಮಳೆಗಾಲದಲ್ಲಿ ಹಳ್ಳ ಉಕ್ಕಿ ಹರಿದಾಗ ಈ ಭಾಗದ ರೈತರ ಸಂಚಾರ ಮೇಲಿಂದ ಮೇಲೆ ಸ್ಥಗಿತಗೊಂಡು ತೊಂದರೆ ಅನುಭವಿಸುತ್ತಿದ್ದರು. ದಶಕಗಳಿಂದಲೂ ಈ ಸಮಸ್ಯೆ ಈಡೇರಿಸಿಲ್ಲ, ನೀವಾದರೂ ಹೇಗಾದರು ಮಾಡಿ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ ಫಲವಾಗಿ ₹8.50 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಇದರಿಂದಾಗಿ ರೈತರ ಬಹುದಿನದ ಕನಸು ನನಸಾಗುವಂತಾಗಿದೆ’ ಸಂತಸ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿ ನೀರಾವರಿ ನಿಗಮದ ವತಿಯಿಂದ ಬಿಡುಗಡೆಯಾದ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಮಣಕವಾಡದ ಸಿದ್ದರಾಮೇಶ್ವರ ಸ್ವಾಮೀಜಿ, ತಾಲ್ಲೂಕು ಜೆ.ಡಿ.ಎಸ್.ಅಧ್ಯಕ್ಷ ವೀರಣ್ಣ ನೀರಲಗಿ, ಅಬ್ಬಾಸ ದೇವರಿಡು, ವೀರನಗೌಡ ಪಾಟೀಲ, ಶಶಿ ಬ್ಯಾಹಟ್ಟಿ, ಮಲ್ಲಿಕಾರ್ಜುನ ಕರಿ, ನಿಂಗನಗೌಡ ಪಾಟೀಲ, ಬಸಣ್ಣ ಬೀರಣ್ಣವರ, ಮೌಲಾಸಾಬ ವೈದ್ಯ ಸೇರಿದಂತೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.