ADVERTISEMENT

ಹುಬ್ಬಳ್ಳಿ: 22 ದೇವಸ್ಥಾನಗಳಿಗೆ ಜೀರ್ಣೋದ್ಧಾರ ಭಾಗ್ಯ

ಮುಜರಾಯಿ ಇಲಾಖೆಯಿಂದ ₹1.11 ಕೋಟಿ ಅನುದಾನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 16:52 IST
Last Updated 20 ಜನವರಿ 2022, 16:52 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಧಾರವಾಡ ಜಿಲ್ಲೆಯ 22 ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ರಾಜ್ಯದ ಮುಜರಾಯಿ ಇಲಾಖೆಯು ₹1.11 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಜಿಲ್ಲೆಯ ಪುರಾತನ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವುದಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನಿರ್ದೇಶನ ನೀಡಿದ್ದೆ. ಅದರಂತೆ, ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಹಿಂದೆ ₹50 ಸಾವಿರದಿಂದ ₹1 ಲಕ್ಷದವರೆಗೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿತ್ತು. ಈ ಬಾರಿ ಆ ಮೊತ್ತವನ್ನು ₹5 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮುಂದೆ, ಉಳಿದ ದೇವಸ್ಥಾನಗಳಿಗೂ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದ್ದು, ಅದಕ್ಕೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.

ADVERTISEMENT

ಹುಬ್ಬಳ್ಳಿಯ ಕುಂಬಾರ ಓಣಿಯ ವಿಠಲ ರುಕ್ಕಿಣಿ ಹರಿಮಂದಿರಕ್ಕೆ ₹6 ಲಕ್ಷ ಅನುದಾನ, ಧಾರವಾಡದ ವಾರ್ಡ್ ನಂ. 4ರ ದ್ಯಾಮವ್ವ -ದುರ್ಗಮ್ಮ ದೇವಸ್ಥಾನ, ಕಮಲಾಪುರ ರಸ್ತೆಯ ನಾರಾಯಣಪೂರದ ಚನ್ನಬಸವೇಶ್ವರ ದೇವಸ್ಥಾನ, ಮಂಡಿಹಾಳ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನ, ಮಾವಿನಕೊಪ್ಪದ ಲಕ್ಷ್ಮೀನಾರಾಯಣ ದೇವಸ್ಥಾನ, ಹಳ್ಳಗೇರಿಯ ಮಾರುತಿ ದೇವಸ್ಥಾನ, ಮುಗುದದ ಬಸವೇಶ್ವರ ದೇವಸ್ಥಾನ, ಕಲಗೇರಿಯ ಬಸವೇಶ್ವರ ದೇವಸ್ಥಾನ, ಯರಿಕೊಪ್ಪದ ಬಸವೇಶ್ವರ ದೇವಸ್ಥಾನ, ಕ್ಯಾರಕೊಪ್ಪದ ಕಲೇಶ್ವರ ದೇವಸ್ಥಾನ, ಮುರಕಟ್ಟೆಯ ಕರೆಮ್ಮದೇವಿ ದೇವಸ್ಥಾನ, ಮುಳಮುತ್ತಲದ ಹನುಮಂತದೇವರ ದೇವಸ್ಥಾನ, ವೆಂಕಟಾಪುರದ ದುರ್ಗಾದೇವಿ ದೇವಸ್ಥಾನ, ಮಂಗಳಕಟ್ಟಿಯ ರೇಣುಕಾಚಾರ್ಯ ಹಾಗೂ ವಿಠಲ ರುಕ್ಕಿಣಿ ದೇವಸ್ಥಾನ, ಗರಗದ ಮೂಗುಬಸವೇಶ್ವರ ದೇವಸ್ಥಾನ, ಕರಡಿಗುಡ್ಡದ ಮಲ್ಲಿಕಾರ್ಜುನ ದೇವಸ್ಥಾನ, ಕಲಘಟಗಿ ತಾಲ್ಲೂಕಿನ ಹನ್ನೆರಡತ್ತಿನ ಮಠ,ದೇವಿಕೊಪ್ಪದ ಯಲ್ಲಮ್ಮ ದೇವಿ ದೇವಸ್ಥಾನ, ಕುಂದಗೋಳ ತಾಲ್ಲೂಕಿನ ಪಶುಪತಿಹಾಳದ ಮಲ್ಲಿಕಾರ್ಜುನ ಸ್ವಾಮೀಜಿ ಬಾಲಲೀಲ ಮಹಾಂತ ಶಿವಯೋಗಿ ಮಠ, ಮತ್ತಿಗಟ್ಟಿಯ ಉಳವಿ ಚನ್ನಬಸವೇಶ್ವರ ದೇವಸ್ಥಾನ ಹಾಗೂ ಬು. ತರ್ಲಘಟ್ಟ ಗ್ರಾಮದ ಶಾಂತವೀರೇಶ್ವರ ಮಠಕ್ಕೆ ತಲಾ ₹5 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.