ADVERTISEMENT

ಧಾರವಾಡ | ಮುಂಗಾರು ಪೂರ್ವ ಮಳೆ ಚುರುಕು: 2.46 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಬಸವರಾಜ ಹವಾಲ್ದಾರ
Published 1 ಜೂನ್ 2020, 17:38 IST
Last Updated 1 ಜೂನ್ 2020, 17:38 IST

ಹುಬ್ಬಳ್ಳಿ: ಮುಂಗಾರು ಪೂರ್ವ ಮಳೆ ಸೋಮವಾರ ಚುರುಕಾಗಿದೆ. ರೈತರೂ ಬಿತ್ತನೆಗೆ ಸಜ್ಜಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 2.46 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ.

ಹೆಸರು, ಗೋವಿನಜೋಳ, ಶೇಂಗಾ, ಸೋಯಾಬಿನ್‌, ಭತ್ತ ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಕಳೆದ ಬಾರಿ ಪ್ರವಾಹದಿಂದಾಗಿ ಹೆಸರು, ಹತ್ತಿ ಸೇರಿದಂತೆ ಬಹಳಷ್ಟು ಬೆಳೆಗಳು ಹಾಳಾಗಿದ್ದವು. ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿತ್ತು. ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ ರೈತರು.

‘ಜಿಲ್ಲೆಗೆ 40 ಕ್ವಿಂಟಲ್‌ ಬಿತ್ತನೆ ಬೀಜ ಬೇಕಿದೆ. ಈಗಾಗಲೇ 10,300 ಕ್ವಿಂಟಲ್‌ ಬೀಜಗಳನ್ನು ತರಿಸಿಕೊಂಡಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ 7,860 ಕ್ವಿಂಟಲ್‌ ವಿತರಣೆ ಮಾಡಲಾಗಿದೆ. ಮಧ್ಯಪ್ರದೇಶ, ಕರ್ನೂಲನಿಂದ ಬಿತ್ತನೆ ಬೀಜ ಬರಬೇಕಾಗಿತ್ತು. ಗುರುವಾರದ ವೇಳೆಗೆ ಉಳಿದ ಬಿತ್ತನೆ ಬೀಜವೂ ಬರಲಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

‘ಜೂನ್‌ 5ಕ್ಕೆ ಮುಂಗಾರು ಮಳೆ ಧಾರವಾಡ ಜಿಲ್ಲೆಯನ್ನು ಪ್ರವೇಶಿಸಲಿದೆ. ಮುಂಗಾರು ಪೂರ್ವ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿತ್ತನೆ ಬೀಜದ ಜೊತೆಗೆ ರಸಗೊಬ್ಬರವೂ ರೈತರಿಗೆ ಬೇಕಾಗಿದೆ. ಜಿಲ್ಲೆಯಲ್ಲಿ 20,700 ಮೆಟ್ರಿಕ್‌ ಟನ್‌ ರಸಗೊಬ್ಬರ ಸಂಗ್ರಹವಿದ್ದು, 60 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರ ಬೇಕಾಗಿದೆ. ಉಳಿದ ರಸಗೊಬ್ಬರವನ್ನು ಶೀಘ್ರದಲ್ಲಿಯೇ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.

ಜಿಲ್ಲೆಯಲ್ಲಿ ಒಟ್ಟು 2.46 ಲಕ್ಷ ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಲಾಗಿದ್ದು, ಧಾರವಾಡ ತಾಲ್ಲೂಕಿನಲ್ಲಿ 63,857, ಹುಬ್ಬಳ್ಳಿ ತಾಲ್ಲೂಕಿನಲ್ಲಿ 34,438, ಕಲಘಟಗಿಯಲ್ಲಿ 45, 252, ಕುಂದಗೋಳದಲ್ಲಿ 38,641 ಹಾಗೂ ನವಲಗುಂದ ತಾಲ್ಲೂಕಿನಲ್ಲಿ 63,088 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ.

ಮುಂಗಾರು ಪೂರ್ವ ಮಳೆ ಸೋಮವಾರ ಸುರಿಯಲು ಆರಂಭಿಸುತ್ತಿದ್ದಂತೆಯೇ, ರೈತ ಸಂಪರ್ಕ ಕೇಂದ್ರಗಳ ಮುಂದೆ ಬಿತ್ತನ ಬೀಜ ಪಡೆಯಲು ರೈತರ ಸರದಿಯ ಸಾಲು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.