ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ನಗರದ ವೈದ್ಯ ರಾಜೀವ್ ಅವರಿಗೆ ಮುಂಬೈ ಡಿಸಿಪಿ ಹೆಸರಲ್ಲಿ ವಿಡಿಯೋ ಕರೆ ಮಾಡಿ ಬೆದರಿಸಿದ ವ್ಯಕ್ತಿ, ಅವರಿಂದ ಹಂತಹಂತವಾಗಿ ಒಟ್ಟು ₹30.16 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ವೈದ್ಯರಿಗೆ ಮೊದಲು ಕರೆ ಮಾಡಿದ ಕೊರಿಯರ್ ಕಂಪನಿಯೊಂದರ ವ್ಯಕ್ತಿಯೊಬ್ಬರು, ‘ನಿಮ್ಮ ಹೆಸರಲ್ಲಿ ಅಪರಿಚಿತ ವ್ಯಕ್ತಿ ಕೆಲವು ವಸ್ತುಗಳನ್ನು ಬುಕ್ ಮಾಡಿ ಕೊರಿಯರ್ ಮಾಡಿದ್ದಾರೆ’ ಎನ್ನುತ್ತಾನೆ. ಅದಕ್ಕೆ ವೈದ್ಯರು, ’ನಾನು ಯಾವುದೇ ವಸ್ತುಗಳನ್ನು ಬುಕ್ ಮಾಡಿಲ್ಲ’ ಎಂದು ಹೇಳುತ್ತಾರೆ. ‘ನಿಮ್ಮ ಆಧಾರ್ ಕಾರ್ಡ್ ಸೋರಿಕೆಯಾಗಿದೆ. ನೀವು ಮುಂಬೈ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು’ ಎಂದು ಹೇಳುತ್ತಾನೆ.
ನಂತರ ವೈದ್ಯರಿಗೆ ಸ್ಕೈಪ್ ಆ್ಯಪ್ ಮೂಲಕ ವಿಡಿಯೊ ಕರೆ ಮಾಡಿದ ಮತ್ತೊಬ್ಬ ವ್ಯಕ್ತಿ, ತಾನು ಮುಂಬೈ ಡಿಸಿಪಿ ಎಂದು ಬೆದರಿಸಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹವಾಲ ವ್ಯವಹಾರಕ್ಕೆ ಲಿಂಕ್ ಆಗಿದೆ. ನಿಮ್ಮ ಬ್ಯಾಂಕ್ ಖಾತೆಯ ವಿವರ ಬೇಕಿದೆ ಎಂದು ಬೆದರಿಸಿ, ಹಣ ವರ್ಗಾಹಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ: ಆನ್ಲೈನ್ ಮೂಲಕ ಕೆಲವು ಉತ್ಪನ್ನಗಳನ್ನು ಖರೀದಿಸಿದರೆ ಹೆಚ್ಚುಲಾಭ ನೀಡುತ್ತೇವೆ ಎಂದು ನಗರದ ಬಿಬಿ ಇಸ್ಮತ್ ಫಾತಿಮಾ ಅವರಿಗೆ ಕರೆ ಮಾಡಿ ನಂಬಿಸಿದ ವ್ಯಕ್ತಿ, ಅವರಿಂದಲೇ ₹96 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು: ಇಲ್ಲಿನ ಗದಗ ರಸ್ತೆಯ ವಿನೋಭಾ ನಗರದ ರಾಜೇಶ ಸಿಗಿನಮ್ ಅವರ ಮನೆ ಬಾಗಿಲಿನ ಬೀಗ ಮುರಿದು, ₹2.19 ಲಕ್ಷ ಮೌಲ್ಯದ 60 ಗ್ರಾಂ ಚಿನ್ನಾಭರಣ ಹಾಗೂ 90 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಮಾಡಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.