ADVERTISEMENT

ನಾಪತ್ತೆಯಾದ ಮಗುವಿನ ಶವ ಪತ್ತೆ

ಎರಡು ಆಟೊ, ಬೈಕ್‌, ಮೊಬೈಲ್‌ ಕಳವು

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 4:42 IST
Last Updated 10 ಜನವರಿ 2021, 4:42 IST
ಶ್ರೇಯಾ
ಶ್ರೇಯಾ   

ಹುಬ್ಬಳ್ಳಿ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಐದು ವರ್ಷದ ಮಗು ಶನಿವಾರ ಪಕ್ಕದ ಮನೆಯ ನೀರಿನ ಟ್ಯಾಂಕ್‌(ಸಂಪ್‌)ನಲ್ಲಿ ಶವವಾಗಿ ಪತ್ತೆಯಾಗಿದೆ.

ಹಳೇಹುಬ್ಬಳ್ಳಿಯ ಹೇಮರಡ್ಡಿ ಮಲ್ಲಮ್ಮ ಕಾಲೊನಿಯ ಭಾರತ್‌ ನಗರ ಪ್ಲಾಟ್‌ನ ನಿವಾಸಿ ಶ್ರೇಯಾ ಗಾಳೆಪ್ಪನವರ ಮೃತಪಟ್ಟ ಮಗು. ಜ.6ರಂದು ಸಂಜೆ ವೇಳೆ ಆಟ ಆಡುತ್ತಿದ್ದಾಗ ನಾಪತ್ತೆಯಾಗಿತ್ತು. ಒಂದು ದಿನ ಮಗಳಿಗಾಗಿ ಹೆತ್ತವರು ಸುತ್ತೆಲ್ಲ ಹುಡುಕಾಡಿದ್ದಾರೆ. ಪತ್ತೆಯಾಗದಿದ್ದಾಗ, ಅವಳ ತಂದೆ ಹನುಮಂತಪ್ಪ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.

‘ಶನಿವಾರ ಮಗುವಿನ ಪಕ್ಕದ ಮನೆಯ ನೀರಿನ ಟ್ಯಾಂಕ್‌(ಸಂಪ್‌)ನಲ್ಲಿ ಕೊಳೆತ ವಾಸನೆ ಬಂದಿದೆ. ಏನೆಂದು ನೋಡಿದಾಗ ಮಗುವಿನ ಶವ ಕೊಳೆತ ಸ್ಥಿತಿಯಲ್ಲಿ ತೇಲುತ್ತಿತ್ತು. ಪಾಲಕರು ಅಪಹರಣ ಪ್ರಕರಣ ದಾಖಲಿಸಿದ್ದರು. ಆದರೆ, ಆಟವಾಡುತ್ತ ಪಕ್ಕದ ಮನೆಗೆ ಹೋದ ಮಗು, ಸಂಪ್‌ಗೆ ಮುಚ್ಚಿದ ಹಲಿಗೆ ತೆಗೆದಾಗ ಅದರೊಳಗೆ ‌‌‌ಬಿದ್ದಿದೆ’ ಎಂದು ಹಳೇಹುಬ್ಬಳ್ಳಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪಕ್ಕದ ಮನೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ADVERTISEMENT

ಆಟೊ ಕಳವು: ನಗರದ ಜನತಾ ಬಜಾರ್‌ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ದೇಸಾಯಿ ಓಣಿಯ ಹನುಮಂತ ಪೋಳ ಅವರ ಆಟೊ ರಿಕ್ಷಾ ಕಳವು ಮಾಡಲಾಗಿದೆ.

ಹನುಮಂತ ಅವರು ಜನತಾ ಬಜಾರ್‌ ಪಕ್ಕ ಆಟೊ ರಿಕ್ಷಾ ನಿಲ್ಲಿಸಿ ಮಾರುಕಟ್ಟೆಗೆ ಹೋಗಿದ್ದರು. ಅರ್ಧ ಗಂಟೆಯಲ್ಲಿ ನಂತರ ಬಂದು ನೋಡಿದಾಗ ಆಟೊ ನಾಪತ್ತೆಯಾಗಿತ್ತು. ಅದರ ಖರೀದಿಗಾಗಿ ಬ್ಯಾಂಕ್‌ಲ್ಲಿ ಸಾಲ ಮಾಡಿದ್ದ ಅವರು, ಸಾಲದ ಕಂತು ಬಾಕಿಯಿದ್ದರಿಂದ ಬ್ಯಾಂಕ್‌ನವರೇ ತೆಗೆದುಕೊಂಡು ಹೋಗಿದ್ದಾರೆ ಎಂದು ಬ್ಯಾಂಕ್‌ಲ್ಲಿ ವಿಚಾರಿಸಿದ್ದಾರೆ. ನಂತರ ಕಳವುವಾಗಿದೆ ಎಂದು ತಿಳಿದು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೊಬೈಲ್‌ ಕಳವು: ಹಳೇಬಸ್‌ ನಿಲ್ದಾಣದಲ್ಲಿ ಯರಗುಪ್ಪಿ ಬಸ್‌ ಹತ್ತುವ ವೇಳೆ ಪ್ರಶಾಂತ ಹುಬ್ಬಳ್ಳಿ ಅವರ ಪ್ಯಾಂಟ್‌ ಜೇಬಿನಲ್ಲಿದ್ದ ₹9ಸಾವಿರ ಮೌಲ್ಯದ ರೆಡ್‌ಮಿ ಮೊಬೈಲ್‌ ಕಳವು ಮಾಡಲಾಗಿದೆ.

ಗೋಕುಲದಿಂದ ಹಳೇಬಸ್‌ ನಿಲ್ದಾಣಕ್ಕೆ ನಗರ ಸಾರಿಗೆ ಬಸ್‌ನಲ್ಲಿ ಬರುವಾಗ ಗದುಗಿನ ಹಿರೇಮಚಾಳದ ನಿವಾಸಿ ವಿಜಯಲಕ್ಷ್ಮಿ ಹಿರೇಮಠ ಅವರ ₹14ಸಾವಿರ ಮೌಲ್ಯದ ಸ್ಯಾಮಸಂಗ್‌ ಮೊಬೈಲ್‌ ಕಳುವಾಗಿದೆ. ಎರಡು ಪ್ರತ್ಯೇಕ ಪ್ರಕರಣ ಉಪನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ.

ಬೈಕ್‌ ಕಳವು: ನಗರದ ಈದ್ಗಾ ಮೈದಾನದಲ್ಲಿ ಪಾರ್ಕ್‌ ಮಾಡಿದ್ದ ಹೀರೊ ಹೊಂಡಾ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳವು ಮಾಡಲಾಗಿದೆ. ಗದುಗಿನ ರೋಣ ತಾಲ್ಲೂಕಿನ ಮಲ್ಲಾಪುರ ಒಣಿ ನಿವಾಸಿ ಮಂಜುನಾಥ ಹಿರೇಗೌಡರ ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರದ ವಿಕ್ಟೋರಿಯಾ ರಸ್ತೆಯ ಯುರೇಕಾ ಕಾರ್ನರ್‌ನ ನೆಲಮಹಡಿಯಲ್ಲಿ ಪಾರ್ಕ್‌ ಮಾಡಿದ್ದ ಟಿವಿಎಸ್‌ ಎಕ್ಸೆಲ್‌ ಕಳವು ಮಾಡಲಾಗಿದೆ. ಶಂಕರ ತಲಾರಿ ಅವರು ಸೆಕ್ಯೂರಿಟಿ ಕೆಲಸಕ್ಕೆ ತೆರಳುವಾಗ ಪಾರ್ಕ್‌ ಮಾಡಿದ್ದರು. ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.