ಹುಬ್ಬಳ್ಳಿ: ಬಿವಿಬಿ ಕಾಲೇಜು ಮೈದಾನವನ್ನು ಸುಸಜ್ಜಿತವಾಗಿ ಅಭಿವೃದ್ಧಿ ಪಡಿಸಲು ₹50 ಲಕ್ಷ ವೆಚ್ಚ ಮಾಡಲಾಗುವುದು ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ. ಡಾ. ಅಶೋಕ ಶೆಟ್ಟರ್ ಹೇಳಿದರು.
ಬಿವಿಬಿ ಮೈದಾನದಲ್ಲಿ ಸೋಮವಾರ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ನೆಟ್ಸ್ನಲ್ಲಿ ಹಾಕಿರುವ ಹೊನಲು ಬೆಳಕಿನ ಸೌಲಭ್ಯ ಉದ್ಘಾಟಿಸಿ ಮಾತನಾಡಿದ ಅವರು ‘ಬಿಡಿಕೆ 20 ವರ್ಷಗಳಿಂದ ಇದೇ ಮೈದಾನದಲ್ಲಿ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುತ್ತಿದೆ. ಈ ಮೂಲಕ ಕ್ರೀಡೆಯ ಬೆಳವಣಿಗೆಗೂ ಅಮೂಲ್ಯ ಕಾಣಿಕೆ ಕೊಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಫೌಂಡೇಷನ್ ಟ್ರಸ್ಟಿ ಬಾಬಾ ಭೂಸದ ಮಾತನಾಡಿ ‘ಮಕ್ಕಳು ಕ್ರೀಡಾ ಸೌಲಭ್ಯ ಬಳಸಿಕೊಳ್ಳಬೇಕು. ಸದಾ ಓದಿನ ಜಂಜಡದಲ್ಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೂಡ ಇಲ್ಲಿನ ಹೊನಲು ಬೆಳಕಿನ ಸೌಲಭ್ಯ ಬಳಸಿಕೊಳ್ಳಬೇಕು’ ಎಂದರು.
‘ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಅಕಾಡೆಮಿಕ್ ಚಟುವಟಿಕೆಗಳಲ್ಲಿ ಅಗ್ರಸ್ಥಾನ ಹೊಂದಿದೆ. ಕ್ರೀಡೆಯಲ್ಲಿಯೂ ಇದೇ ಸ್ಥಾನ ಹೊಂದಲು ಬಿವಿಬಿ ಮೈದಾನವನ್ನು ಉತ್ಕೃಷ್ಟವಾಗಿ ಅಭಿವೃದ್ಧಿಪಡಿಸಬೇಕು’ ಎಂದರು.
ಕೆಎಲ್ಇ ಡೀನ್ ಸಂಜಯ ಕೊಟಬಾಗಿ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ. ಕುರಗೋಡಿ, ಫೌಂಡೇಷನ್ ಕಾರ್ಯದರ್ಶಿ ಪಂಕಜ ಮುನಾವರ, ಅಮಿತ್ ಭೂಸದ, ಮನೀಠ ಠಕ್ಕರ್, ನಿಖಿಲ್ ಭೂಸದ, ಎಂಜಿನಿಯರ್ ಗುರುನಾಥ ಮುರುಗೋಡು, ಶಿವಾನಂದ ನಾಯ್ಕ, ಹೇಮಂತ ಜಾಮಶೆಟ್ಟಿ, ರಘುರಾಮ ರಾಯಚೂರು, ಪ್ರಕಾಶ ಹೊನವಾಡ, ಭೀಮರಾವ ಜೋಶಿ, ಪವನ ಗಂಗಾವತಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.