ಅಳ್ನಾವರ: ‘ಅಧುನಿಕ ಜೀವನ ಶೈಲಿಯಿಂದ ಸಂಬಂಧಗಳು ಕುಸಿಯಬಾರದು. ತಂದೆ, ತಾಯಿ ಹಾಗೂ ಗುರು–ಶಿಷ್ಯರ ಬಾಂಧವ್ಯ ಅನನ್ಯವಾಗಿದ್ದು, ಇದಕ್ಕೆ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿ. ಈ ಸಂಪ್ರದಾಯ ಮುಂದಿನ ಪೀಳಿಗೆಗೆ ಮಾದರಿಯಾಗಲಿ’ ಎಂದು ನಿವೃತ್ತ ಶಿಕ್ಷಕ ಐ.ಬಿ. ಶೀಲವಂತರಮಠ ಹೇಳಿದರು.
ಇಲ್ಲಿನ ದಿ ನ್ಯೂ ಇಂಗ್ಲಿಷ್ ಸಂಯುಕ್ತ ಪದವಿಪೂರ್ವ ಕಾಲೇಜು, ಎಸ್ಎಸ್ಟಿ ಬಾಲಿಕಾ ಪ್ರೌಢಶಾಲೆ ಮತ್ತು ಹಳೆಯ ವಿದ್ಯಾರ್ಥಿಗಳಿಂದ ನಡೆದ 1979-80ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕಲಿತ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಮುಗ್ದ ಮಗುವಾಗಿ ಈ ಶಾಲೆಗೆ ನಾಲ್ಕು ದಶಕಗಳ ಹಿಂದೆ ಬಂದು ಭವಿಷ್ಯ ರೂಪಿಸಿಕೊಂಡು ಸಮಾಜದ ಉನ್ನತ ಹುದ್ದೆ ಅಲಂಕರಿಸಿದ ನಿಮ್ಮೆಲ್ಲರ ಬಾಳು ಹಸನಾಗಲಿ. ಪರಿಪಕ್ಷ ವ್ಯಕ್ವಿತ್ವ ನಿಮ್ಮದಾಗಲಿ. ಅಕ್ಷರ ದೀಪ ಬೆಳಗಿಸಿಕೊಂಡ ಮುಖದಲ್ಲಿ ಸದಾ ಮಂದಹಾಸ ಮೂಡಿರಲಿ’ ಎಂದು ಹಾರೈಸಿದರು.
ನಾಲ್ಕು ದಶಕಗಳ ಹಿಂದೆ ಇದೇ ಶಾಲಾ ಆವರಣದಲ್ಲಿ ಮಾಡಿದ ತುಂಟಾಟ, ಕಲಿತ ಆಟ ಹಾಗೂ ಪಾಠಗಳನ್ನು ‘ವಿದ್ಯಾರ್ಥಿಗಳು’ ನೆನಪಿಸಿಕೊಂಡರು. ಹಳೇ ವಿದ್ಯಾರ್ಥಿಗಳು ಗುರುಗಳ ಪಾದಕ್ಕೆ ಬಿದ್ದು ಆಶೀರ್ವಾದ ಪಡೆದ ಕ್ಷಣ ನೆರೆದವರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು. ಗುರುಗಳಿಂದ ಅಕ್ಷರ ಜ್ಷಾನ ಪಡೆದ ಮುಖಗಳಲ್ಲಿ ಧನ್ಯತಾ ಭಾವ ಎದ್ದು ಕಾಣುತ್ತಿತ್ತು.
ಅಗಲಿದ ಗುರುಗಳನ್ನು ಹಾಗೂ ಸಹಪಾಠಿಗಳನ್ನು ನೆನೆದು ಆತ್ಮಕ್ಕೆ ಶಾಂತಿ ಕೋರಿದರು. ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರು ಗುರು ಶಿಷ್ಯರ ಸೇತುವೆ ಬೆಸೆಯುವ ಹಾಡಿಗೆ ನೃತ್ಯ ಪ್ರದರ್ಶಿಸಿ ಬೇಷ್ ಅನಿಸಿಕೊಂಡರು.
ಜೆ.ಎನ್.ಕುಲಕರ್ಣಿ, ಎಸ್.ಬಿ. ಪಾಟೀಲ, ಆರ್.ಆರ್. ಅರಸಿನಗೇರಿ, ಜೆ.ಬಿ. ಕುಲಕರ್ಣಿ, ಎಲ್.ಜೆ. ಜೋಶಿ, ಎಸ್.ಜಿ.ಗೌರಿ, ಆರ್.ಆರ್. ಬಿಜಾಪೂರ, ಸಿ.ಬಿ. ಭೂಗಾರ, ಎಂ.ಎಸ್. ಗಲಗಲಿ, ಎಚ್. ಎನ್. ವಡ್ಡರ, ಎಂ. ಎಫ್. ಅಗಸಿಮನಿ, ಬಿ.ಸಿ. ಹಿರೇಮಠ, ಆರ್.ಎಂ. ಗಲಗಲಿ, ಇಸ್ಮಾಯಿಲ್ ದೇವರಾಯಿ, ಉಸ್ಮಾನ ಬಾತಖಂಡಿ, ಮಹಾದೇವಿ ಹಿರೇಮಠ, ಪ್ರಮೀಳಾ ಜಕಾತಿ, ಸಿದ್ದು ಸೊಪ್ಪಿ, ಸದಾನಂದ ಅಂಬಡಗಟ್ಟಿ, ಮಲ್ಲಿಕಾರ್ಜುನ ಸೀಮಿಮಠ, ಬಸವರಾಜ ಕುರುಬರ, ಬಾಳು ಕರೆಟಿ, ಬಸವರಾಜ ಧಾರವಾಡ, ಸಿದ್ದು ಬಾಗೇವಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.