
ಅಳ್ನಾವರ: ಅಮೃತ ಭಾರತ ಯೋಜನೆಯಡಿ ಅಧುನಿಕ ಪದ್ದತಿಯಲ್ಲಿ ಅಭಿವೃದ್ಧಿಪಡಿಸಿದ ಇಲ್ಲಿನ ರೈಲು ನಿಲ್ದಾಣದಿಂದ ಸಂಚರಿಸುವ ಎಲ್ಲ ರೈಲುಗಳಿಗೆ ನಿಲುಗಡೆ ಕಲ್ಪಿಸಬೇಕು ಹಾಗೂ ಈ ಹಿಂದೆ ಇದ್ದು, ಸದ್ಯ ಸ್ಥಗಿತಗೊಂಡಿರುವ ಗೂಡ್ಸ್ ಪಾರ್ಸಲ್ ಸೇವೆ ಪುನರಾರಂಬಿಸಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಮೋಲ ಗುಂಜೀಕರ ನೇತ್ರತ್ವದ ತಂಡ ಶನಿವಾರ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿತು.
ದಾಂಡೇಲಿ-ಅಳ್ನಾವರ ಮಧ್ಯೆ ಪ್ರಾರಂಭವಾದ ನೂತನ ರೈಲಿಗೆ ಚಾಲನೆ ನೀಡಲು ಸಮೀಪದ ದಾಂಡೇಲಿಗೆ ಆಗಮಿಸಿದ್ದ ಸಚಿವ ಸೋಮಣ್ಣ ಅವರನ್ನು ಇಲ್ಲಿನ ಮುಖಂಡರ ನಿಯೋಗ ಭೇಟಿಯಾಗಿ ‘ಅಳ್ನಾವರದಿಂದ ರಾತ್ರಿ ರಾಣಿ ಚನ್ನಮ್ಮ ರೈಲು ತೆರಳಿದ ನಂತರ ಬೆಂಗಳೂರು ಕಡೆಗೆ ಹೋಗಲು ಯಾವುದೇ ರೈಲಿನ ವ್ಯವಸ್ಥೆ ಇಲ್ಲ. ಇದೇ ಮಾರ್ಗದಲ್ಲಿ ಸಂಚರಿಸುವ ಬೆಳಗಾವಿ-ಬೆಂಗಳೂರು (20654/20653) ರೈಲಿಗೆ ನಿಲುಗಡೆ ಸೌಲಭ್ಯ ಕಲ್ಪಿಸಿದರೆ ಬಹಳಷ್ಟು ಅನುಕೂಲವಾಗಲಿದೆ. ನಿಲುಗಡೆಯಿಂದ ಸಮಯದಲ್ಲಿ ವಿಳಂಬಕ್ಕೆ ಅವಕಾಶವಿರುವುದಿಲ್ಲ. 1ನೇ ಪ್ಲಾಟಫಾರ್ಮ್ ನೇರವಾಗಿದ್ದು, ರೈಲಿನ ಸಂಚಾರ ನಿಧಾನವಾಗುವ ಪ್ರಮೇಯ ಇಲ್ಲ. ಕಟ್ಟಿಗೆ ಪಿಠೋಪಕರಣಗಳಿಗೆ ಹೆಸರಾಗಿರುವ ಅಳ್ನಾವರದಿಂದ ಸಿದ್ದಪಡಿಸಿದ ಪಿಠೋಪಕರಣಗಳನ್ನು ನಿತ್ಯ ದೇಶದ ವಿವಿಧೆಡೆ ಕಳುಹಿಸಲಾಗುತ್ತಿದೆ. ಹಿಂದೆ ಇಲ್ಲಿನ ನಿಲ್ದಾಣದಲ್ಲಿದ್ದ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಿರುವ ಕಾರಣ ಉಂಟಾಗುತ್ತಿರುವ ತೊಂದರೆಯನ್ನು ಸಚಿವರ ಗಮನಕ್ಕೆ ತಂದಾಗ ಆದಷ್ಟು ಶೀಘ್ರ ಪಾರ್ಸಲ್ ಸೇವೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯೋಗದ ಸಮಸ್ಯೆಯನ್ನು ಶಾಂತ ಚಿತ್ರದಿಂದ ಆಲಿಸಿದ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿ ಈ ಭಾಗದ ಬೇಡಿಕೆಗಳ ಶೀಘ್ರ ಪರಿಹಾರಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಅಳ್ನಾವರ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಯೋಗದ ಸದಸ್ಯರೊಂದಿಗೆ ಮಾಹಿತಿ ಹಂಚಿಕೊಂಡರು. ಇದರ ಜೊತೆಗೆ ವಾಸ್ಕೋ, ಸಂಪರ್ಕ ಕ್ರಾಂತಿ, ಜೋಧಪುರ, ಅಜ್ಮೀರ್, ಗಾಂಧಿಧಾಮ ರೈಲುಗಳಿಗೂ ಆಧ್ಯತೆಯ ಮೇರೆಗೆ ನಿಲುಗಡೆ ನೀಡಲು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಮೋಲ ಗುಂಜೀಕರ ನೇತೃತ್ವದಲ್ಲಿ, ರೈಲು ನಿಲ್ದಾಣ ಸಲಹಾ ಸಮಿತಿ ಸದಸ್ಯ ಪ್ರವೀಣ ಪವಾರ, ಬಾಬು ಸುಣಗಾರ, ಶಶಿಕುಮಾರ ಪತಂಗೆ, ಗುರುರಾಜ ಸಬನೀಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.