
ಅಳ್ನಾವರ: ವೇಗವಾಗಿ ಬೆಳೆಯುತ್ತಿರುವ ಹೊಸ ತಾಲ್ಲೂಕು ಕೇಂದ್ರವಾದ ಪಟ್ಟಣಕ್ಕೆ ಅವಶ್ಯ ಮೂಲ ಸೌಲಭ್ಯ ಕಲ್ಪಿಸುವ ಮಹಾದಾಶೆ ಹೊತ್ತು ಪ್ರಸಕ್ತ ಸಾಲಿನಲ್ಲಿ ₹11.23 ಕೋಟಿಗೂ ಮಿಕ್ಕಿದ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮಗದಮು ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿ, ರಸ್ತೆ, ಚರಂಡಿ ಉದ್ಯಾನವನ ಸೇರಿದಂತೆ ಸರ್ವೊತೋಮುಖ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ. ಇದಕ್ಕೆ ಸಲಹೆ ಸೂಚನೆ ನೀಡಿ ಎಂದರು.
ಅಕೌಂಟೆಂಟ್ ಸಾವಿತ್ರ ಗುತ್ತಿ ಮಾತನಾಡಿ, ಪಟ್ಟಣದ ಕೆರೆಗಳ ಅಭಿವೃದ್ಧಿಗೆ ₹3 ಕೋಟಿ ಮೀಸಲಿಡಲಾಗಿದೆ. ಆಸ್ತಿ ತೆರಿಗೆಯಿಂದ ₹70 ಲಕ್ಷ, ನೀರಿನ ಕರ ₹1.35 ಕೋಟಿ, ಮಾರುಕಟ್ಟೆ ಶುಲ್ಕ ₹10 ಲಕ್ಷ, ಕಟ್ಟಡ ಪರವಾನಗಿ ಶುಲ್ಕ ₹15 ಲಕ್ಷ ಹೀಗೆ ವಿವಿಧ ಮೂಲಗಳಿಂದ ಒಟ್ಟು ₹11.23 ಕೋಟಿ ಜಮೆ ನೀರಿಕ್ಷಿಸಲಾಗಿದೆ ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಎಸ್.ಬಿ. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಒಂದು ಕೆರೆಯನ್ನು ದತ್ತು ಪಡೆದು ಸಂಬಂದಪಟ್ಟ ಇಲಾಖೆಯ ಸಹಯೋಗದಿಂದ ಸಮಗ್ರ ಅಭಿವೃದ್ಧಿ ಮಾಡಲು ಕ್ರೀಯಾ ಯೋಜನೆ ರೂಪಿಸಬೇಕು. ವಾಯು ವಿಹಾರದ ವ್ಯವಸ್ಥೆ ಮಾಡಬೇಕು. ಸುಂದರ ಉದ್ಯಾನವನ ನಿರ್ಮಿಸಬೇಕು. ಸ್ಮಶಾನ ಅಭಿವೃದ್ಧಿ, ಶೌಚಾಲಯ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಗುರ್ಲಹುಸೂರ, ಎಸ್.ಎಂ. ಬೆಂತೂರ, ಪ್ರವೀಣ ಪವಾರ, ಶಿವಾಜಿ ಡೊಳ್ಳಿನ್, ಅನ್ವರಖಾನ ಬಾಗೇವಾಡಿ, ಸತ್ತಾರ ಬಾತಖಂಡಿ, ಗುರುರಾಜ ಸಬನೀಸ್, ಶಶಿಧರ ಪತಂಗೆ, ಗಜಾನನ ಚಲವಾದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.