ಹುಬ್ಬಳ್ಳಿ: ಅಂಗಾರಕ ಸಂಕಷ್ಟಿ ಅಂಗವಾಗಿ ನಗರದ ವಿವಿಧ ಗಣೇಶ ದೇವಸ್ಥಾನಗಳಲ್ಲಿ ಮಂಗಳವಾರ ಗಣಪನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದಲೇ ದೇಗುಲಗಳಲ್ಲಿ ಹಲವು ಧಾರ್ಮಿಕ ಕಾರ್ಯಗಳು ಜರುಗಿದವು.
ಶುಭಕೃತ ಸಂವತ್ಸರದ ಮೊದಲ ಅಂಗಾರಕ ಸಂಕಷ್ಟಿ ವ್ರತ ಇದಾಗಿರುವುದರಿಂದ ಗಣೇಶನಿಗೆ ಮಾಡಿದ್ದ ತರಹೇವಾರಿ ಅಲಂಕಾರಗಳು ಗಮನ ಸೆಳೆದವು. ಸಂಕಷ್ಟಿ ವ್ರತಧಾರಿಗಳು ಬೆಳಿಗ್ಗೆಯೇ ದೇವಸ್ಥಾನಕ್ಕೆ ತೆರಳಿ ದೇವರಿಗೆ ಗರಿಕೆ ಹಾಗೂ ಹೂ ಸಮರ್ಪಿಸಿ ಭಕ್ತಿ ಮೆರೆದರು. ಕೆಲವರು ಬೆಳಿಗ್ಗೆಯಿಂದ ಉಪವಾಸವಿದ್ದು, ರಾತ್ರಿ ಚಂದ್ರನ ದರ್ಶನದ ಬಳಿಕ ವಿಘ್ನ ನಿವಾರಕನ ಸ್ಮರಿಸಿ ಊಟ ಸವಿದರು.
ಕೆಲವೆಡೆ ಗಣಹೋಮ ಹಾಗೂ ಸಂಕಷ್ಟಿ ಪೂಜೆ ನಡೆಯಿತು. ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಗಳ ಎದುರು ಸಾಲುಗಟ್ಟಿ ನಿಂತು ವಿಘ್ನ ನಿವಾರಕನ ದರ್ಶನ ಪಡೆದು ಪುನೀತರಾದರು. ಅಕ್ಕಿಹೊಂಡದ ಗಜಾನನ ಮಂದಿರದಲ್ಲಿರುವ ಗಣೇಶ ಮೂರ್ತಿಗೆ ಮುತ್ತುಗಳಿಂದ ಅಲಂಕಾರ ಮಾಡಲಾಗಿತ್ತು. ಬಮ್ಮಾಪುರ ಓಣಿಯ ಮಹಾಗಣಪತಿ ದೇವಸ್ಥಾನ, ದಾಜಿಬಾನಪೇಟೆ ಸೇರಿದಂತೆ ನಗರದ ವಿವಿಧೆಡೆ ಇರುವ ಗಣೇಶ ಗುಡಿಗಳಲ್ಲಿ ವಿಶೇಷ ಪೂಜೆಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.