ಹುಬ್ಬಳ್ಳಿ: ‘ಗದಗಿನ ಅಪೂರ್ವಾ ಪುರಾಣಿಕ ಅವರು ಲವ್ ಜಿಹಾದ್ನಿಂದಲೇ ಹಲ್ಲೆಗೆ ಒಳಗಾಗಿದ್ದಾರೆ. ಪ್ರಕರಣದ ಸಮಗ್ರ ತನಿಖೆ ಆಗಬೇಕು. ಆರೋಪಿ ಇಜಾಜ್ ಶಿರೂರಗೆ ಕಠಿಣ ಶಿಕ್ಷೆಯಾಗಬೇಕು’ ಎಂದುಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವಾ ಅವರನ್ನು ಶನಿವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.
‘ವಿಚ್ಚೇದನಕ್ಕೆ ಅರ್ಜಿ ಹಾಕಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಮೊದಲೇ ಮದುವೆಯಾಗಿ ಮಕ್ಕಳಿದ್ದ ಆರೋಪಿ ಮತ್ತೊಂದು ಮದುವೆಯಾಗಿ, ಅವರನ್ನೂ ಬಿಡುತ್ತಾರೆ, ಅಲ್ಲದೇ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಾರೆ ಎಂದರೆ ಪ್ರಕರಣದ ಹಿಂದಿನ ಕಾರಣ ತಿಳಿಯಬೇಕು. ಲವ್ ಜಿಹಾದ್ಗೆ ಇದೊಂದು ನಿದರ್ಶನ’ ಎಂದು ಅಭಿಪ್ರಾಯಪಟ್ಟರು.
‘ಈ ಪ್ರಕರಣದ ನಂತರ ಯುವತಿಯರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ’ ಎಂದರು.
‘ದಿ ಕಾಶ್ಮೀರಿ ಫೈಲ್ಸ್ ಚಿತ್ರ ಮಾಡಿರುವುದು ಬಿಜೆಪಿಯ ನಿರ್ಮಾಪಕರಲ್ಲ. ಹುಸಿ ಜ್ಯಾತ್ಯತೀತ ವಾದಿಗಳು ಅವರನ್ನು ಬಿಜೆಪಿ ನಿರ್ಮಾಪಕರು ಎಂಬಂತೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಈ ಚಿತ್ರ ನಿರ್ಮಿಸಿದವರನ್ನು ಆ ರೀತಿ ಬಿಂಬಿಸುತ್ತಿದ್ದಾರೆ. ಕರಾಳ ಇತಿಹಾಸ, ಓಲೈಕೆ ರಾಜಕೀಯ ಜನರಿಗೆ ತಿಳಿಯಬೇಕು. ಕಾಶ್ಮೀರದಲ್ಲಿ ಹತ್ಯೆಗಳು ನಡೆದಾಗ ಅಂದಿನ ಸರ್ಕಾರ ಕಣ್ಮುಚ್ಚಿಕೊಂಡು ಕುಳಿತಿತ್ತು‘ ಎಂದು ಅವರು ಆಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.