ADVERTISEMENT

ಹುಬ್ಬಳ್ಳಿ: ಪಾಲಿಕೆ ಕಂದಾಯ ಅಧಿಕಾರಿ ಮೇಲೆ ಹಲ್ಲೆ

ಆಯುಕ್ತರಿಗೆ ದೂರು, ನೌಕರರಿಗೆ ಭದ್ರತೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 12:22 IST
Last Updated 22 ಏಪ್ರಿಲ್ 2020, 12:22 IST
ನೌಕರರಿಗೆ ಭದ್ರತೆ ಒದಗಿಸಬೇಕು ಎಂದು ಕೋರಿ ಸಹಾಯಕ ಕಂದಾಯ ಅಧಿಕಾರಿ ಎನ್‌.ಕೆ. ಅಂಗಡಿ ಬುಧವಾರ ಪಾಲಿಕೆಯ ಅಧಿಕಾರಿಗೆ ಮನವಿ ಸಲ್ಲಿಸಿದರು
ನೌಕರರಿಗೆ ಭದ್ರತೆ ಒದಗಿಸಬೇಕು ಎಂದು ಕೋರಿ ಸಹಾಯಕ ಕಂದಾಯ ಅಧಿಕಾರಿ ಎನ್‌.ಕೆ. ಅಂಗಡಿ ಬುಧವಾರ ಪಾಲಿಕೆಯ ಅಧಿಕಾರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಕರ್ತವ್ಯದಲ್ಲಿ ತೊಡಗಿದ್ದ ಮಹಾನಗರ ಪಾಲಿಕೆಯ ಎಂಟನೇ ವಲಯದ ಸಹಾಯಕ ಕಂದಾಯ ಅಧಿಕಾರಿ ಎನ್‌.ಕೆ. ಅಂಗಡಿ ಅವರ ಮೇಲೆ ಬುಧವಾರ ಆನಂದ ನಗರ ರಸ್ತೆಯ ಹೆಗ್ಗೇರಿ ಕ್ರಾಸ್ ಬಳಿ ಪೊಲೀಸರು ಹಲ್ಲೆ ಮಾಡಿದ್ದಾರೆ.

ಲಾಕ್‌ಡೌನ್‌ ಇರುವ ಕಾರಣ ಕೆಎಂಎಫ್‌ನಿಂದ ನೀಡಲಾದ ಉಚಿತ ಹಾಲನ್ನು ಕೊಳೆಗೇರಿ ನಿವಾಸಿಗಳಿಗೆ ಹಂಚಲು ಹೋಗುವ ವೇಳೆ ಈ ಘಟನೆ ನಡೆದಿದೆ. ಹಳೇ ಹುಬ್ಬಳ್ಳಿ ಠಾಣೆ ಪ್ರೊಬೇಷನರಿ ಪಿಎಸ್‌ಐ ಬಿ.ಎಸ್‌. ಸುಖಾನಂದ ಹಲ್ಲೆ ಮಾಡಿದ್ದಾರೆ ಎಂದು ಅಂಗಡಿ ದೂರಿದ್ದಾರೆ.

‘ಪಾಲಿಕೆ ನೀಡಿದ ತುರ್ತು ಸೇವಾ ಪಾಸ್‌ ತೋರಿಸಿದರೂ ಪೊಲೀಸ್‌ ಅಧಿಕಾರಿ ತಾಳ್ಮೆ ಇಲ್ಲದಂತೆ ನಡೆದುಕೊಂಡು ಲಾಠಿಯಿಂದ ಹೊಡದಿದ್ದಾರೆ. ಸರ್ಕಾರಿ ಅಧಿಕಾರಿ ಜೊತೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಪಾಲಿಕೆಯ ನೌಕರರ ಘನತೆಗೆ ಧಕ್ಕೆ ಉಂಟಾಗಿದೆ. ಕರ್ತವ್ಯ ನಿರತ ಪಾಲಿಕೆ ಸಿಬ್ಬಂದಿಗೆ ಭದ್ರತೆಯೇ ಇಲ್ಲದಂತಾಗಿದ್ದು, ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು’ ಎಂದು ಅಂಗಡಿ ಅವರು ಪಾಲಿಕೆಯ ಆಯಕ್ತ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.

ADVERTISEMENT

ಪಾಲಿಕೆ ಎದುರು ಹೋರಾಟ:ಘಟನೆ ನಡೆದ ಕಲೆ ಹೊತ್ತಿನ ಬಳಿಕ ಪಾಲಿಕೆ ಸಿಬ್ಬಂದಿ ಹಾಗೂ ನೌಕರರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ತವ್ಯದಲ್ಲಿ ನಿರತಾಗಿದ್ದಾಗ ಹಿಂದೆಯೂ ಅಧಿಕಾರಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಕೊರೊನಾ ಸೋಂಕು ಹರಡುವ ಭೀತಿಯಿರುವ ಕಾರಣ ನೌಕರರು ಮಾಸ್ಕ್‌ ಧರಿಸಿ ಪಾಲಿಕೆಯ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.