ಹುಬ್ಬಳ್ಳಿ: ‘ಕೆಲ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎನ್ನಲಾದ ಮಧುಬಲೆ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ. ಪ್ರಕರಣಗಳ ತನಿಖೆಯನ್ನು ಹೆಸರಿಗೆ ಮಾತ್ರ ಸೀಮಿತಗೊಳಿಸಿ, ಅವರ ದೌರ್ಬಲ್ಯಗಳನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
‘ಮಧುಬಲೆ ಪ್ರಕರಣಗಳಲ್ಲಿ ಜನಸಾಮಾನ್ಯರು ಭಾಗಿಯಾಗಿದ್ದರೆ, ತಕ್ಷಣವೇ ತನಿಖೆ ನಡೆಯುತಿತ್ತು. ಬಂಧನ ಆಗುತ್ತಿತ್ತು. ಪ್ರಮುಖ ವ್ಯಕ್ತಿಗಳು ಭಾಗಿ ಆಗಿರುವುದರಿಂದ, ಅವರನ್ನು ಬಂಧಿಸಲು ಸರ್ಕಾರಕ್ಕೆ ಭಯವಾಗಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮಧುಬಲೆ ಪ್ರಕರಣದ ಸಂಪೂರ್ಣ ಮಾಹಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಿಳಿದಿದೆ. ಸಚಿವ ಕೆ.ಎನ್. ರಾಜಣ್ಣ ಅವರು ಪೊಲೀಸರಿಗೆ ದೂರು ನೀಡುವ ಬದಲು, ಗೃಹಸಚಿವರಿಗೆ ಜ್ಞಾಪನ ಪತ್ರ ನೀಡಿದ್ದು ಯಾಕೆ? ಪೊಲೀಸ್ ತನಿಖೆ ನಡೆದಿದ್ದರೆ ಪ್ರಕರಣದ ಭಾಗಿಯಾಗಿರುವ ಎಲ್ಲರ ಹೆಸರು ಬಹಿರಂಗವಾಗುತ್ತಿತ್ತು. ಸರ್ಕಾರ ಪೇಚಿಗೆ ಸಿಲುಕಬೇಕಾಗುತ್ತದೆ ಎಂದು ಹೀಗೆ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.