ADVERTISEMENT

ಭಗವದ್ಗೀತೆಯಿಂದ ಭೌತಿಕ ಜಗತ್ತಿನ ಅರಿವು: ಬೊಮ್ಮಾಯಿ

ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ‘ಭಗವದ್ಗೀತಾ ಜ್ಞಾನಲೋಕ’ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 18:17 IST
Last Updated 15 ಮೇ 2022, 18:17 IST
ಹುಬ್ಬಳ್ಳಿ ನಗರದ ಬೈರಿದೇವರಕೊಪ್ಪದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐದು ಎಕರೆಯಲ್ಲಿ ನಿರ್ಮಿಸಿರುವ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟಿಸಿ, ಬಳಿಕ ವೀಕ್ಷಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ದಾವಣಗೆರೆಯ ಲೀಲಾ ಬೆಹೆನ್‌ ಇದ್ದಾರೆ
ಹುಬ್ಬಳ್ಳಿ ನಗರದ ಬೈರಿದೇವರಕೊಪ್ಪದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐದು ಎಕರೆಯಲ್ಲಿ ನಿರ್ಮಿಸಿರುವ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟಿಸಿ, ಬಳಿಕ ವೀಕ್ಷಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ದಾವಣಗೆರೆಯ ಲೀಲಾ ಬೆಹೆನ್‌ ಇದ್ದಾರೆ   

ಹುಬ್ಬಳ್ಳಿ: ‘ಜನರು ಕರ್ಮಕ್ಕಿಂತ ಮೊದಲೇ ಫಲ ಕೇಳುತ್ತಾರೆ. ಕೃಷ್ಣ ಹೇಳಿದಂತೆ, ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು. ಆಗ ದೊಡ್ಡ ಸಾಧನೆ ಮಾಡಬಹುದು. ಬದುಕಿನ ಬಗ್ಗೆ ಆಂತರಿಕವಾಗಿ ತಿಳಿಯಲು ಆತ್ಮಸಾಕ್ಷಿ ನೆರವಾದರೆ, ಭೌತಿಕ ಜಗತ್ತಿನ ಬಗ್ಗೆ ತಿಳಿಯಲು ಭಗವದ್ಗೀತೆ ಸಹಾಯ ಮಾಡುತ್ತದೆ’ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯ ಓಂ ಶಾಂತಿ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ‘ಭಗವದ್ಗೀತಾ ಜ್ಞಾನಲೋಕ’ವನ್ನು (ವಸ್ತು ಸಂಗ್ರಹಾಲಯ) ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,‘ಜಗತ್ತಿನ ಪ್ರತಿಯೊಂದು ಸಮಸ್ಯೆಗೂ ಭಗವದ್ಗೀತೆಯಲ್ಲಿ ಪರಿಹಾರವಿದೆ.ಸಮಸ್ಯೆ ಎದುರಾದಾಗ ಅದರ ಒಂದು ಪುಟ ತಿರುವಿದರೆ ಸಾಕು, ಪರಿಹಾರ ಸಿಗುತ್ತದೆ. ಅಧ್ಯಾತ್ಮದ ಬಗ್ಗೆ ಜ್ಞಾನ ಪಡೆಯಲು ಭಗವಂತನಲ್ಲಿ ನಾವು ಕರಗಿ ಲೀನವಾಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ’ ಎಂದರು.

‘ನಾವು ಏಕೆ ಜನ್ಮ ತಾಳಿದ್ದೇವೆ? ಈಗ ಎಲ್ಲಿದ್ದೇವೆ? ಎನ್ನುವ ಸಂಕೀರ್ಣ ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ನಾವೆಲ್ಲರೂ ಅರೆಬೆಂದ ಕಾಳು. ಗೊತ್ತಿರುವುದಷ್ಟೇ ಜಗತ್ತು ಎಂದುಕೊಳ್ಳುತ್ತೇವೆ. ಗೊತ್ತಿಲ್ಲದ ಜಗತ್ತಿನ ಪರಿಚಯವಾಗಬೇಕಾದರೆ ಭಗವಂತನ ಧ್ಯಾನ ಮಾಡಬೇಕು. ಸರಿ, ತಪ್ಪುಗಳನ್ನು ವಿಮರ್ಶೆಗೆ ಒಳಪಡಬೇಕು.ಇಂತಹ ವಿಚಾರಗಳ ಕ್ರಾಂತಿಯನ್ನು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಕೇಂದ್ರ ಸಚಿವವೇದ, ಶಾಸ್ತ್ರ ಹಾಗೂ ಉಪನಿಷತ್ತುಗಳೇ ಭಗವದ್ಗೀತೆಯ ಮೂಲ. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಜಗತ್ತಿನ ಬಹುತೇಕ ದೇಶಗಳು ಅನುಕರಿಸುತ್ತಿವೆ. ಯಾಕೆಂದರೆ, ಇಲ್ಲಿಯ ಧರ್ಮ ಜಾತಿಗೆ ಮೀಸಲಾದುದ್ದಲ್ಲ.‌ ಅದೊಂದು ಜೀವನ ಸಾಗಿಸುವ ಪದ್ಧತಿ’ ಎಂದರು.

ಮುಂಬೈ, ಮೌಂಟ್ಅಬು, ದೆಹಲಿ, ಅಹಮದಾಬಾದ್‌, ಮೈಸೂರು, ಬೆಂಗಳೂರು, ಕಲಬುರ್ಗಿ, ಸೊಲ್ಲಾಪುರ, ಲಕ್ನೊ ಸೇರಿದಂತೆ ದೇಶದ ವಿವಿಧ ಭಾಗಗಳ ಈಶ್ವರಿ ವಿಶ್ವವಿದ್ಯಾಲಯದಿಂದ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮೌಂಟಅಬುವಿನ ರಾಜಯೋಗಿನಿ ಸಂತೋಷ ದೀದೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಅರವಿಂದ ಬೆಲ್ಲದ, ಸೋಮಶೇಖರ ರೆಡ್ಡಿ, ರಾಜಯೋಗಿ ಬೃಜ್ ಮೋಹನ್ ಭಾಯಿಜಿ, ಕರುಣಾ ಬಾಯಿಜಿ, ನಿರ್ಮಲಾ ಬೆಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.