
ಹುಬ್ಬಳ್ಳಿ: ‘ಬನ್ನಂಜೆ ಗೋವಿಂದಾಚಾರ್ಯರ ಬರಹ ಮೇಲ್ನೋಟಕ್ಕೆ ಸುಲಭವಾಗಿ ಅರ್ಥವಾಗುವುದಿಲ್ಲ. ಪದಗಳ ಒಳಗೆ ಹೊಕ್ಕು ಅರ್ಥೈಸಿಕೊಂಡಾಗ, ಅದರ ಭಾವ ಮತ್ತು ಅಂತರಾರ್ಥದ ಬೆಳಕು ಗೋಚರಿಸುತ್ತದೆ’ ಎಂದು ಶತಾವಧಾನಿ ಆರ್. ಗಣೇಶ ಹೇಳಿದರು.
ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಸಾಹಿತ್ಯ ಪ್ರಕಾಶನ, ಕಲಾ ಸುಜಯ ಮತ್ತು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಬನ್ನಂಜೆ 90 ವಿಶ್ವನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬನ್ನಂಜೆ ಅವರು ಸಾಕಷ್ಟು ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು. ತಾವು ಓದಿದ್ದನ್ನು ಅರ್ಥೈಸಿಕೊಂಡು, ಪೂರಕ ಮಾಹಿತಿ ಸಂಗ್ರಹಿಸಿ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಹಳೆಗಾಲದ ಲಿಪಿಯಲ್ಲಿರುತ್ತಿದ್ದ ಅಕ್ಷರಗಳನ್ನು ವಿದ್ವತ್ ಪೂರ್ಣವಾಗಿ ಅರಿತು, ಭಾವ ಮತ್ತು ಅರ್ಥಕ್ಕೆ ರಸಭಂಗವಾಗದಂತೆ ಬರೆಯುತ್ತಿದ್ದರು. ಅವರ ಕಾವ್ಯದ ಸ್ವಾರಸ್ಯ ಅರಿಯಬೇಕೆಂದರೆ, ಕಣ್ಣಿಗೆ ಅಂಜನ ಹಚ್ಚಬೇಕು’ ಎಂದರು.
‘ಆಚಾರ್ಯರ ಬರಹದಲ್ಲಿ ಅಲಂಕಾರ, ಛಂದಸ್ಸುಗಳು ಇದ್ದು, ಅರ್ಥಪೂರ್ಣ ಮಾಹಿತಿ ನೀಡುತ್ತವೆ. ಕಾವ್ಯ ಎಂದರೇನು, ಲಕ್ಷಣಗಳು ಯಾವುವು ಎನ್ನುವ ಬಗ್ಗೆ ತಿಳಿಸಿದ್ದಾರೆ. ಸಂಸ್ಕೃತ ಚಲನಚಿತ್ರದ ಮೊದಲ ಗೀತ ರಚನೆಕಾರ ಅವರಾಗಿದ್ದು, ಅದ್ಭುತ ಸಂಸ್ಕೃತ ವಾಗ್ಮಿ, ಬರಹಗಾರರೂ ಆಗಿದ್ದರು. ಸಂಸ್ಕೃತ ಉಚ್ಛ್ರಾಯ ಸ್ಥತಿಯಲ್ಲಿದ್ದಾಗ, 200 ವರ್ಷಗಳ ಹಿಂದಿನ ಭಾಷೆ ಎನ್ನವಂತೆ ಅವರ ಬರಹಗಳು ಇವೆ. ಭಗವದ್ಗೀತೆಯನ್ನು ‘ಭಗವಂತನ ನಲ್ನುಡಿ’ ಎಂದು ಬರೆದರು. ಎಂದಿಗೂ ಸಂಪಾದನೆಗಾಗಿ ಅವರು ಗ್ರಂಥಗಳನ್ನು ಬರೆದಿಲ್ಲ, ಭಾವನೆಗಾಗಿ ಬರೆದಿದ್ದರು’ ಎಂದರು.
ಗಂಗಾವತಿ ಪ್ರಾಣೇಶ ಮಾತನಾಡಿ, ‘ಇತ್ತೀಚಿಗೆ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಮನಸ್ಸಿಗೆ ಬಂದದ್ದನ್ನು ಬರೆದು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಮೊದಲಿಗೆ, ಅವರಲ್ಲಿ ಓದುವ ಹವ್ಯಾಸವೇ ಇಲ್ಲ. ಇನ್ನೊಬ್ಬರ ಪುಸ್ತಕ ಓದಿದಾಗ, ಹೆಚ್ಚು ತಿಳಿದುಕೊಂಡಾಗ ಮಾತ್ರ ಬರೆಯುವ ಪದಗಳು ಗಟ್ಟಿಯಾಗಿರುತ್ತವೆ. ಗ್ರಂಥಾಲಯಗಳಿಗಿಂತ ಹೊರಗಡೆಯ ಡಬ್ಬಾ ಅಂಗಡಿಯಲ್ಲಿ ಜನಸಂದಣಿ ಇರುತ್ತದೆ’ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಪ್ರಸ್ತಾವಿಕ ಮಾತನಾಡಿದರು. ಕಲಾ ಸುಜಯ ಸಂಸ್ಥೆಯ ಸುಜಯ ಶಾನಭಾಗ ಅವರು ಬನ್ನಂಜೆ ಗೋವಿಂದಾಚಾರ್ಯ ಪ್ರವಚನ ಆಧಾರಿತ ‘ಚಿಂತನ ರಾಮಾಯಣ’ ನೃತ್ಯರೂಪಕ ಪ್ರಸ್ತುತ ಪಡಿಸಿದರು. ವನಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಸಂಗೀತ ಪ್ರಸ್ತುತ ಪಡಿಸಿದರು. ವೀಣಾ ಬನ್ನಂಜೆ, ಎಂ. ಸುಬ್ರಹ್ಮಣ್ಯ ಇದ್ದರು.
ಬನ್ನಂಜೆ ಸಾಹತ್ಯ ಕೊಡುಗೆ ಸ್ಮರಣೆ ಗ್ರಂಥಾಲಯಗಳಲ್ಲಿ ಓದುಗರ ಕೊರತೆ; ವಿಷಾದ ಭಾವನೆಗಳ ಅಭಿವ್ಯಕ್ತಿಗೆ ಗ್ರಂಥಗಳ ರಚನೆ
‘ಪದಗಳ ಆಳಕ್ಕೆ ಇಳಿದು ಚರ್ಚೆ’
‘ಬೇಂದ್ರೆ ಮತ್ತು ಬನ್ನಂಜೆ ಪರಸ್ಪರ ಮಾತನಾಡಲು ಕುಳಿತರೆಂದರೆ ಪದ–ಪದಗಳ ಆಳಕ್ಕೆ ಇಳಿದು ಹತ್ತಾರು ದೃಷ್ಟಿಕೋನದಲ್ಲಿ ಚರ್ಚಿಸಿ ವಿಮರ್ಶಿಸುತ್ತಿದ್ದರು’ ಎಂದು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ನೆನಪಿಸಿಕೊಂಡರು. ‘ಬೇಂದ್ರೆ ಮತ್ತು ಬನ್ನಂಜೆ’ ಒಡನಾಟ’ದ ಕುರಿತು ಮಾತನಾಡಿದ ಅವರು ‘ಅವರಿಬ್ಬರು ಅದ್ಭುತ ಪಾಂಡಿತ್ಯ ಹೊಂದಿದ್ದ ಮಹಾಪುರುಷರು. ಪ್ರತಿಯೊಂದು ವಾಕ್ಯ ಪದಗಳನ್ನು ತಮ್ಮದೇ ದೃಷ್ಟಿಕೋನದಲ್ಲಿ ವೈಚಾರಿಕವಾಗಿ ಅಧ್ಯಾತ್ಮಿಕವಾಗಿ ವಿಶ್ಲೇಷಿಸುತ್ತಿದ್ದರು. ನಾವು ಹೇಳುವುದು ಮೊದಲು ನಮಗೆ ಅರ್ಥವಾಗಬೇಕು ಎನ್ನುತ್ತಿದ್ದರು. ಅವರ ಭಾವನೆಗಳು ಭಾಷೆ ಹಾಗೂ ಶಬ್ದಕ್ಕೆ ತಕ್ಕಂತೆ ಬದಲಾಗುತ್ತಿದ್ದವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.