ADVERTISEMENT

ಹುಬ್ಬಳ್ಳಿ | ಜೈವಿಕ ಅನಿಲ; ಯೋಜನೆಗೆ ಹಿನ್ನಡೆ

ಒಂದು ವರ್ಷದ ಅವಧಿ ಮೀರಿದರೂ ಕಾಣಸಿಗದ ಬೆಳವಣಿಗೆ

ಶ್ರೀಕಾಂತ ಕಲ್ಲಮ್ಮನವರ
Published 8 ಆಗಸ್ಟ್ 2025, 5:25 IST
Last Updated 8 ಆಗಸ್ಟ್ 2025, 5:25 IST
<div class="paragraphs"><p>ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಜೈವಿಕ ಸಿಎನ್‌ಜಿ ಘಟಕ ಸ್ಥಾಪಿಸಲು ಗುರುತಿಸಲಾಗಿರುವ ಜಾಗ&nbsp; </p></div>

ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಜೈವಿಕ ಸಿಎನ್‌ಜಿ ಘಟಕ ಸ್ಥಾಪಿಸಲು ಗುರುತಿಸಲಾಗಿರುವ ಜಾಗ 

   

ಪ್ರಜಾವಾಣಿ ಚಿತ್ರ/ ಗುರು ಹಬೀಬ 

ಹುಬ್ಬಳ್ಳಿ: ಇಲ್ಲಿನ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ಜೈವಿಕ ಸಿ.ಎನ್‌.ಜಿ ಅನಿಲ ಘಟಕ ಸ್ಥಾಪಿಸುವುದಾಗಿ ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಯೋಜನೆ ಘೋಷಿಸಿ, ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಳೆದಿದ್ದರೂ ಘಟಕ ಸ್ಥಾಪನೆಯಾಗಿಲ್ಲ.

ADVERTISEMENT

ಹುಬ್ಬಳ್ಳಿ ಸೇರಿ ಬೆಂಗಳೂರು, ಮೈಸೂರು, ಬಳ್ಳಾರಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತರಕಾರಿ, ಹೂವು– ಹಣ್ಣುಗಳ ತ್ಯಾಜ್ಯವನ್ನು ಬಳಸಿಕೊಂಡು ಜೈವಿಕ ಸಿ.ಎನ್‌.ಜಿ ಅನಿಲ ತಯಾರಿಸುವ ಘಟಕ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಇದನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ಪ್ರಕಟಿಸಿದ್ದರು. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 

ಸಭೆಗಳ ಮೇಲೆ ಸಭೆ: 

ಮುಖ್ಯಮಂತ್ರಿ ಅವರು ಈ ಯೋಜನೆ ಪ್ರಕಟಿಸುತ್ತಿದ್ದಂತೆ ಕಳೆದ ವರ್ಷ ಉತ್ಸಾಹ ತೋರಿದ ಬೆಂಗಳೂರಿನ ಎಪಿಎಂಸಿ ಅಧಿಕಾರಿಗಳು, ಇತರ ಎಪಿಎಂಸಿ ಅಧಿಕಾರಿಗಳ ಜೊತೆ ಪದೇ ಪದೇ ವಿಡಿಯೊ ಕಾನ್ಫರೆನ್ಸ್‌ ನಡೆಸಿದರು. ಜೈವಿಕ ಸಿಎನ್‌ಜಿ ಘಟಕ ಸ್ಥಾಪಿಸುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಜಾಗ ಗುರುತಿಸಲು ಸೂಚಿಸಿದರು. 

ಬೆಂಗಳೂರು ಅಧಿಕಾರಿಗಳ ಸೂಚನೆಯ ಮೇರೆಗೆ ಹುಬ್ಬಳ್ಳಿಯ ಅಧಿಕಾರಿಗಳು, ಎಪಿಎಂಸಿ ಆವರಣದೊಳಗೆ ದನದ ಮಾರ್ಕೆಟ್‌ ಬಳಿ 2 ಎಕರೆ ಜಾಗವನ್ನು ಗುರುತಿಸಿ ಇಟ್ಟರು.

ಡಿಪಿಆರ್‌ಗೆ ಸೂಚನೆ: 

ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿ, ಘಟಕ ಸ್ಥಾಪಿಸುವ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಲು ಖಾಸಗಿ ಏಜೆನ್ಸಿಯೊಂದಕ್ಕೆ ಟೆಂಡರ್‌ ನೀಡುವುದಾಗಿ ಬೆಂಗಳೂರಿನ ಅಧಿಕಾರಿಗಳು 2024ರ ಮೇ ತಿಂಗಳಿನಲ್ಲಿ ತಿಳಿಸಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಯಾವ ಏಜೆನ್ಸಿಯವರೂ ಎಪಿಎಂಸಿಗೆ ಬಂದು ಡಿಪಿಆರ್‌ ತಯಾರಿಸಿಲ್ಲ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.‌ 

ಏನಿದು ಯೋಜನೆ?:

ಎಪಿಎಂಸಿ ಮಾರುಕಟ್ಟೆಗಳಲ್ಲಿ ಪ್ರತಿದಿನ ತರಕಾರಿ, ಹೂವು– ಹಣ್ಣುಗಳ ಮಾರಾಟ ನಡೆಯುತ್ತದೆ. ದಿನದ ಅಂತ್ಯಕ್ಕೆ, ಮಾರಾಟದ ಬಳಿಕ ಉಳಿಯುವ ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಇದರಿಂದ ಜೈವಿಕ ಸಿಎನ್‌ಜಿ ಅನಿಲ ತಯಾರಿಸುವ ಯೋಜನೆ ಸಿ.ಎಂ. ಅವರದ್ದಾಗಿತ್ತು. ಮಾರುಕಟ್ಟೆಯನ್ನು ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದ್ದರು. ಆದರೆ, ಈ ಯೋಜನೆಗಾಗಿ ಅನುದಾನ ನಿಗದಿಪಡಿಸಿರಲಿಲ್ಲ. ಅಲ್ಲದೇ, ಕಾಲಮಿತಿಯನ್ನೂ ಹೇಳಿರಲಿಲ್ಲ. 

ಅನುದಾನ ನಿಗದಿ ಮಾಡದಿರುವುದು ಹಾಗೂ ಕಾಲಮಿತಿ ಹೇರದ ಕಾರಣ, ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಬಜೆಟ್‌ನಲ್ಲಿ ಕೇವಲ ಪ್ರಚಾರ ಪಡೆಯುವುದಕ್ಕಾಗಿ ಈ ಯೋಜನೆ ಪ್ರಕಟಿಸಿದಂತಿದೆ  ಎಂದು ಎಪಿಎಂಸಿ ವ್ಯಾಪಾರಸ್ಥರು ದೂರಿದರು.

ಎಪಿಎಂಸಿ ಆವರಣದಲ್ಲಿ ಸಿ.ಎನ್‌.ಜಿ ಘಟಕ ಸ್ಥಾಪಿಸುವ ಸಂಬಂಧ ಯಾವುದೇ ಪ್ರಕ್ರಿಯೆಗಳು ಇದುವರೆಗೆ ನಡೆದಿಲ್ಲ.
ಗುರುಪ್ರಸಾದ ಕಾರ್ಯದರ್ಶಿ ಅಮರಗೋಳ ಎಪಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.