
ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ವಶಕ್ಕೆ ಪಡೆಯುವಾಗ ಪೊಲೀಸರು ದೌರ್ಜನ್ಯ ಎಸಗಿ, ಅವರನ್ನು ವಿವಸ್ತ್ರಗೊಳಿಸಿದ್ದಾರೆ’ ಎಂದು ಆರೋಪಿಸಿ ಬುಧವಾರ ಹುಧಾ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
‘ಕೇಶ್ವಾಪುರ ಪೊಲೀಸ್ ಠಾಣೆ ಎದುರು ಮೇಯರ್ ಜ್ಯೋತಿ ಪಾಟೀಲ ಮತ್ತು ಉಪಮೇಯರ್ ಸಂತೋಷ ಚವ್ಹಾಣ್ ನೇತೃತ್ವದಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಮಹಿಳಾ ಮೋರ್ಚಾ ಕಾರ್ಯಕರ್ತರು ಧರಣಿ ನಡೆಸಿ, ಕಾಂಗ್ರೆಸ್ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಇನ್ಸ್ಪೆಕ್ಟರ್ ಕೆ.ಎಸ್.ಹಟ್ಟಿ ಅವರು ರಾತ್ರಿ 2 ಗಂಟೆ ಸಮಯಕ್ಕೆ ಮಹಿಳಾ ಸಿಬ್ಬಂದಿಯನ್ನು ಕರೆದೊಯ್ಯದೆ ಸುಜಾತಾ ಅವರ ಮನೆಗೆ ಹೋಗುತ್ತಾರೆ. ಮಧ್ಯರಾತ್ರಿ ಸಮಯ ಅವರು ಅಲ್ಲಿಗೆ ಹೋಗಿ ಬೆದರಿಸುವ ಒತ್ತಡ, ಅನಿವಾರ್ಯತೆ ಏನಿತ್ತು? ತಕ್ಷಣ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ಮತದಾರರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಎಲ್ಲ ಭಾಗದಲ್ಲೂ ಬಿಎಲ್ಒಗಳಿಗೆ ಸಹಕಾರ ದೊರೆಯುತ್ತಿದೆ. ಅದರೆ, ವಾರ್ಡ್ ನಂ. 59ರಲ್ಲಿ ಮಾತ್ರ ವಿರೋಧ
ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದರೆ ಅಲ್ಲಿ ನಕಲಿ ಮತದಾರರು ಇರುವ ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ಸಹ ತನಿಖೆಗೆ ಆಗ್ರಹಿಸುತ್ತಿದ್ದೇವೆ’ ಎಂದರು.
‘ಇನ್ಸ್ಪೆಕ್ಟರ್ ಹಟ್ಟಿ ಅವರು ಸುಜಾತಾ ಅವರಿಗೆ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ರಾತ್ರಿ ಎರಡು ಗಂಟೆ ವೇಳೆ ಅವರನ್ನು ಊರ ಹೊರಗಿನ ಹೊಲಕ್ಕೆ ಕರೆದುಕೊಂಡು ಹೋಗಿ ಬಂದಿದ್ದಾರೆ ಎಂದರೆ ಏನರ್ಥ’ ಎಂದು ಮಾಜಿ ಶಾಸಕಿ ಸೀಮಾ ಮಸೂತಿ ಪ್ರಶ್ನಿಸಿದರು.
ಪ್ರಕರಣ ದಾಖಲು: ಸುಜಾತಾ ಹಂಡಿ ಅವರನ್ನು ವಶಕ್ಕೆ ಪಡೆಯುವ ವೇಳೆ ವಿಡಿಯೊ ಚಿತ್ರೀಕರಣ ಮಾಡಿ, ಅದನ್ನು ಪ್ರಸಾರ ಮಾಡಿರುವ ಆರೋಪದ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆಯುವಾಗ ಅವರೇ ವಿವಸ್ತ್ರವಾಗಿದ್ದು, ಅದನ್ನು ವ್ಯಕ್ತಿಯೊಬ್ಬರು ಚಿತ್ರೀಕರಣ ಮಾಡಿಕೊಂಡು ಸಾರ್ವಜನಿಕವಾಗಿ ಹಂಚಿಕೆ ಮಾಡಿ, ಅವರ ಮಾನಕ್ಕೆ ಕುಂದುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಪೊಲೀಸರಿಂದ ಅಚಾತುರ್ಯ ನಡೆದಿಲ್ಲ’
‘ಸುಜಾತಾ ಅವರನ್ನು ವಶಕ್ಕೆ ಪಡೆಯುವಾಗ ಪೊಲೀಸ್ ಸಿಬ್ಬಂದಿಯನ್ನು ನೂಕಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ನಮ್ಮ ಸಿಬ್ಬಂದಿಗೆ ಅವರೇ ಕಚ್ಚಿದ್ದಾರೆ. ನಮ್ಮಿಂದ ಯಾವುದೇ ಅಚಾತುರ್ಯ ನಡೆದಿಲ್ಲ’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು. ‘ಮಹಿಳೆಯನ್ನು ವಾಹನಕ್ಕೆ ಹತ್ತಿಸಿದಾಗ ಅವರಾಗಿಯೇ ವಿವಸ್ತ್ರಗೊಂಡಿದ್ದರು. ಸ್ಥಳೀಯರ ಸಹಾಯದಿಂದ ಸಿಬ್ಬಂದಿ ಬೇರೆ ಬಟ್ಟೆ ತಂದು ಕೊಟ್ಟಿದ್ದಾರೆ’ ಎಂದರು. ‘ಸುಜಾತಾ ಅವರ ವಿರುದ್ಧ 2020ರಿಂದ 2025ರ ಅಂತ್ಯದವರೆಗೆ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಈ ವರ್ಷ ನಾಲ್ಕು ಪ್ರಕರಣಗಳು ಸೇರಿ ಒಟ್ಟು ಒಂಬತ್ತು ಪ್ರಕರಣಗಳು ಇವೆ. ಅವರ ನಡವಳಿಕೆ ಬಗ್ಗೆ ಮೊದಲೇ ಮಾಹಿತಿಯಿದ್ದ ಕಾರಣ ಬಂಧನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದರು’ ಎಂದು ಸ್ಪಷ್ಟಪಡಿಸಿದರು.
‘ವಾಸ್ತವ ಅರಿಯಬೇಕು’
‘ನಗರದ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯನ್ನು ವಶಕ್ಕೆ ಪಡೆಯಲು ಹೋದಾಗ ಅವರೇ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಾವೇ ವಿವಸ್ತ್ರಗೊಂಡು ಗಲಾಟೆ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ‘ಸತ್ಯಾಸತ್ಯತೆ ಮರೆಮಾಚಿ ಪೊಲೀಸರ ಮೇಲೆ ಆರೋಪಿಸಲಾಗುತ್ತದೆ. ಮಾಧ್ಯಮಗಳು ಮತ್ತು ಸಾರ್ವಜನಿಕರು ವಾಸ್ತವ ಅರಿಯಬೇಕು’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ಪೊಲೀಸರ ವಿರುದ್ಧದ ಆರೋಪದ ಕುರಿತು ಹಾಗೂ ಪ್ರಕರಣದ ಸಮಗ್ರ ತನಿಖೆಯನ್ನು ಡಿಸಿಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ನಡೆಸಲಾಗುವುದು.ಎನ್. ಶಶಿಕುಮಾರ್ ಕಮಿಷನರ್ ಹು–ಧಾ ಮಹಾನಗರ ಪೊಲೀಸ್
ನ್ಯಾಯ ಕೇಳಲು ಬಂದ ಸ್ವತಃ ಮೇಯರ್ ಉಪಮೇಯರ್ಗೆ ಠಾಣೆ ಪ್ರವೇಶಿಸದಂತೆ ಅಡ್ಡಗಟ್ಟಿದ್ದು ಕಾನೂನು ಉಲ್ಲಂಘನೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆಜ್ಯೋತಿ ಪಾಟೀಲ, ಮೇಯರ್
ಶಾಸಕ ಮಹೇಶ ಟೆಂಗಿನಕಾಯಿ ಅವರು ಸುಜಾತಾ ಅವರ ಮನೆ ಎದುರು ಸಭೆ ನಡೆಸಿ ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆ. ಈ ಮೂಲಕ ಹುಬ್ಬಳ್ಳಿಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ.ರಜತ್ ಉಳ್ಳಾಗಡ್ಡಿಮಠ, ಕಾಂಗ್ರೆಸ್ ಮುಖಂಡ
ವಾರ್ಡ್ ನಂ. 59ರ ವ್ಯಾಪ್ತಿಯಲ್ಲಿ ವಲಸಿಗರು ಕಾನೂನು ಬಾಹಿರವಾಗಿ ವಾಸವಿದ್ದು ಮತದಾರರ ಚೀಟಿ ಪಡೆದಿದ್ದಾರೆ. ಅದು ಬಹಿರಂಗ ಆಗುತ್ತದೆ ಎಂದು ಕಾಂಗ್ರೆಸ್ ಗದ್ದಲ ಮಾಡಿದೆಮಹೇಶ ಟೆಂಗಿನಕಾಯಿ, ಶಾಸಕ
ಕಾಂಗ್ರೆಸ್ ಪಕ್ಷವು ರಾಜ್ಯದ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಎಲ್ಲ ಘಟನೆಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಲಿಪಶು ಮಾಡುವ ಹುನ್ನಾರ ನಡೆಯುತ್ತಿದೆಜಗದೀಶ ಶೆಟ್ಟರ್, ಬೆಳಗಾವಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.