ADVERTISEMENT

ರೈಲ್ವೆ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ: ಒಬ್ಬರಿಗೆ ಗಾಯ

ಬಕೆಟ್‌ ಮೇಲೆ ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’ ಉಲ್ಲೇಖ; ಮಹಾರಾಷ್ಟ್ರ ಚುನಾವಣೆ ನಂಟು?

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 6:58 IST
Last Updated 22 ಅಕ್ಟೋಬರ್ 2019, 6:58 IST
ಪ್ಲಾಸ್ಟಿಕ್‌ ಬಕೆಟ್‌ನಲ್ಲಿ ಇದ್ದ ಸ್ಫೋಟಕಗಳನ್ನು ಬಾಂಬ್‌ ನಿಷ್ಕ್ರಿಯ ದಳ ಸಿಬ್ಬಂದಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಗೆ ಒಯ್ದರು
ಪ್ಲಾಸ್ಟಿಕ್‌ ಬಕೆಟ್‌ನಲ್ಲಿ ಇದ್ದ ಸ್ಫೋಟಕಗಳನ್ನು ಬಾಂಬ್‌ ನಿಷ್ಕ್ರಿಯ ದಳ ಸಿಬ್ಬಂದಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಗೆ ಒಯ್ದರು   

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದ 1ನೇ ಪ್ಲಾಟ್ ಫಾರಂನಲ್ಲಿ ಸೋಮವಾರ ನಿಗೂಢ ಸ್ಫೋಟಕವೊಂದು ಸಿಡಿದು, ಆತಂಕ ಸೃಷ್ಟಿಸಿದೆ. ಸ್ಫೋಟಕ ಇದ್ದ ಪ್ಲಾಸ್ಟಿಕ್‌ ಬಕೆಟ್‌ ಮೇಲೆ ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’ ಎಂದು ಬರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಘಟನೆಯಲ್ಲಿ ಇಲ್ಲಿನ ಅರಳಿಕಟ್ಟಿ ಕಾಲೊನಿ ನಿವಾಸಿ, ರೈಲ್ವೆ ನಿಲ್ದಾಣದಲ್ಲಿ ಟೀ ಮಾರಾಟ ಮಾಡುತ್ತಿದ್ದ ಹುಸೇನ್‌ ಸಾಬ್ ನಾಯಕವಾಲೆ ಎಂಬುವರ ಬಲಗೈ ಸುಟ್ಟು ಕರಕಲಾಗಿದೆ. ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಂದಿಗಳ ಹಾವಳಿ ತಪ್ಪಿಸಲು ಬಳಸುವ ಫೀಲ್ಡ್‌ ಬಾಂಬ್‌ (ಕಡಿಮೆ ತೀವ್ರತೆಯ ಸ್ಫೋಟಕ) ರೀತಿಯ ಸ್ಫೋಟಕ ಇದಾಗಿದ್ದು, ಅದನ್ನು ಯಾವ ಕಾರಣಕ್ಕೆ ರೈಲಿನಲ್ಲಿ ಸಾಗಿಸುತ್ತಿದ್ದರು ಎಂಬುದು ನಿಗೂಢವಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

ADVERTISEMENT

ಬಾಂಬ್ ಇಟ್ಟಿದ್ದ ಬಕೆಟ್‌ ಮೇಲೆ ಮಹಾರಾಷ್ಟ್ರ ಶಾಸಕ ಪ್ರಕಾಶ ಅಬೀದ್‌ಕರ್‌ ಎಂಬುವವರ ಹೆಸರು ಕೂಡ ಇದ್ದು, ಇದು ಅಲ್ಲಿನ ಚುನಾವಣೆ ಜತೆಗೂ ತಳಕುಹಾಕಿಕೊಂಡಿರಬಹುದೇ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ವಿಜಯವಾಡದಿಂದ ಬೆಳಿಗ್ಗೆ 11.30ಕ್ಕೆ ಇಲ್ಲಿಗೆ ಬಂದು ನಿಂತಿದ್ದ ವಿಜಯವಾಡ– ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ರಟ್ಟಿನ ಬಾಕ್ಸ್‌ ಇರುವುದು ಆರ್‌ಪಿಎಫ್‌ ಪೊಲೀಸರ ಕಣ್ಣಿಗೆ ಬಿತ್ತು. ಅದನ್ನು ಹುಸೇನ್‌ಸಾಬ್‌ ಅವರಿಂದ ತರಿಸಿ, ಸ್ಟೇಷನ್‌ ಮಾಸ್ಟರ್‌ ಕೊಠಡಿಯಲ್ಲಿ ಬಿಚ್ಚಿದರು. ರಟ್ಟಿನ ಬಾಕ್ಸ್‌ನಲ್ಲಿದ್ದ ಪ್ಲಾಸ್ಟಿಕ್‌ ಬಕೆಟ್‌ ತೆರೆದಾಗ, ಚಿಕ್ಕ ಚಿಕ್ಕ ಎಂಟು ಪ್ಲಾಸ್ಟಿಕ್‌ ಬಾಕ್ಸ್‌ಗಳು ಕಂಡು ಬಂದಿವೆ. ಅವುಗಳು ಅಲುಗಾಡದಂತೆ ಅದರ ಒಳಗೆ ಗೋಧಿ ತುಂಬಲಾಗಿತ್ತು.

ಅನುಮಾನ ಬಂದ ರೈಲ್ವೆ ಪೊಲೀಸರು, ಹುಸೇನ್‌ ಅವರಿಗೆ ಹೊರಗಡೆ ಹೋಗಿ ಒಂದು ಪ್ಲಾಸ್ಟಿಕ್ ಬಾಕ್ಸ್ ತೆರೆಯಲು ಸೂಚಿಸಿದರು. ಬಾಕ್ಸ್ ತೆರೆದಾಗ ಒಣಗಿದ ನಿಂಬೆ ಹಣ್ಣಿನ ಆಕಾರದ ಎರಡು ಉಂಡೆಗಳು ಕಂಡು ಬಂದಿವೆ. ಅವುಗಳಲ್ಲಿ ಒಂದು ಹೊರ ತೆಗೆದ ಹುಸೇನ್‌, ಪರಿಶೀಲಿಸಲೆಂದು ನೆಲಕ್ಕೆ ಬಡಿದಾಗ ಅದು ಒಮ್ಮೆಲೇ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ 20 ಅಡಿ ದೂರದಲ್ಲಿರುವ ಸ್ಟೇಷನ್‌ ಮಾಸ್ಟರ್‌ ಕಚೇರಿಯ ತಡೆಗೋಡೆಯ ಗಾಜು ಪುಡಿಯಾಗಿದೆ. ಅಲ್ಲದೇ, ಅದರ ಅಬ್ಬರದ ಸದ್ದಿಗೆ ಪ್ರಯಾಣಿಕರು ಭಯಗೊಂಡು ದೂರ ಓಡಿದರು.

ಶ್ವಾನ ದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳ ಸಿಬ್ಬಂದಿ ತಕ್ಷಣ ಬಂದು ಪರಿಶೀಲಿಸಿದರು. ಬಕೆಟ್‌ನಲ್ಲಿದ್ದ ಏಳು ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ನಿಷ್ಕ್ರಿಯ ದಳದ ಸಿಬ್ಬಂದಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ತೆಗ್ಗು ತೆಗೆದು ಹುಗಿದಿದ್ದಾರೆ. ಅದರ ಮೇಲೆ ಉಸುಕಿನ ಚೀಲ ಹಾಕಿ ಭದ್ರಪಡಿಸಿದ್ದಾರೆ. ತಜ್ಞರು ಬೆಂಗಳೂರಿನಿಂದ ಬಂದು ಪರಿಶೀಲನೆ ನಡೆಸಿದ ನಂತರ, ಅವುಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.