ADVERTISEMENT

PV Web Exclusive | ಅವಳಿನಗರದ ಬಿಆರ್‌ಟಿಎಸ್‌ಗೆ ದೇಶದಲ್ಲಿಯೇ ಅಗ್ರಸ್ಥಾನ !

ಶ್ರೀಕಾಂತ ಕಲ್ಲಮ್ಮನವರ
Published 23 ನವೆಂಬರ್ 2020, 7:59 IST
Last Updated 23 ನವೆಂಬರ್ 2020, 7:59 IST
ಹುಬ್ಬಳ್ಳಿ– ಧಾರವಾಡ ಅವಳಿ ನಗರದ ನಡುವೆ ಪ್ರತ್ಯೇಕ ಕಾರಿಡಾರ್‌ನಲ್ಲಿ ಸಂಚರಿಸುತ್ತಿರುವ ಬಿಆರ್‌ಟಿಎಸ್‌ ‘ಚಿಗರಿ’ ಬಸ್‌
ಹುಬ್ಬಳ್ಳಿ– ಧಾರವಾಡ ಅವಳಿ ನಗರದ ನಡುವೆ ಪ್ರತ್ಯೇಕ ಕಾರಿಡಾರ್‌ನಲ್ಲಿ ಸಂಚರಿಸುತ್ತಿರುವ ಬಿಆರ್‌ಟಿಎಸ್‌ ‘ಚಿಗರಿ’ ಬಸ್‌   

ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಪ್ರಯಾಣಿಕರು ನೀಡಿದ ಅಭೂತಪೂರ್ವ ಪ್ರೋತ್ಸಾಹದಿಂದ ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಕೊರೊನಾ ನಂತರ ಚೇತರಿಸಿಕೊಳ್ಳುವುದರಲ್ಲಿಯೂ ಮುಂಚೂಣಿಯಲ್ಲಿದ್ದು, ದೇಶದ ಪ್ರಮುಖ 2ನೇ ಹಂತದ ಮಹಾನಗರಗಳಾದ ಪುಣೆ, ಅಹಮದಾಬಾದ್‌, ಸೂರತ್, ವಡೋದರ ನಗರದಲ್ಲಿರುವ ಬಿಆರ್‌ಟಿಎಸ್‌ ಅನ್ನು ಹಿಂದಿಕ್ಕಿದೆ. ಪ್ರಯಾಣಿಕರ ದಟ್ಟಣೆ ಆಧಾರದ ಮೇಲೆ ಹೇಳುವುದಾದರೆ ಸದ್ಯಕ್ಕೆ ದೇಶದಲ್ಲಿಯೇ ಅಗ್ರಸ್ಥಾನಕ್ಕೇರಿದೆ.

ಪ್ರಯಾಣಿಕರಿಗೆ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ವಿಶ್ವ ಬ್ಯಾಂಕ್‌, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬಿಆರ್‌ಟಿಎಸ್‌ (ಬಸ್‌ ರ‍್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ) 2018ರಲ್ಲಿ ಆರಂಭಿಸಿತ್ತು. ವೇಗವಾಗಿ ಓಡುವ ಈ ಬಸ್‌ಗಳಿಗೆ ‘ಚಿಗರಿ’ ಎಂತಲೂ ಹೆಸರಿಟ್ಟಿದ್ದಾರೆ. ವಿಶಿಷ್ಟ ವಿನ್ಯಾಸದ ಇಂತಹ 100 ಬಸ್‌ಗಳಿವೆ. ಕೊರೊನಾ ನಂತರ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದ್ದರಿಂದ ಈಗ 80 ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಇನ್ನುಳಿದ ಬಸ್‌ಗಳನ್ನೂ ರಸ್ತೆಗೆ ಇಳಿಸಲು ಬಿಆರ್‌ಟಿಎಸ್‌ ಸಿದ್ಧವಾಗಿದೆ.

ಕೊರೊನಾಕ್ಕಿಂತ ಮುಂಚೆ ಪ್ರತಿದಿನ ಸರಾಸರಿ 80 ಸಾವಿರ ಜನರು (ವಿದ್ಯಾರ್ಥಿಗಳು ಸೇರಿ) ಪ್ರಯಾಣಿಸುತ್ತಿದ್ದರು. ₹ 9 ಲಕ್ಷ ಆದಾಯ ಬರುತ್ತಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಎರಡು ತಿಂಗಳ ನಂತರ ಸಂಚಾರ ಪುನರಾರಂಭಗೊಂಡಿತು. ಹಂತ ಹಂತವಾಗಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಈಗ ಪ್ರತಿದಿನ 26 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸರಾಸರಿ ₹ 7 ಲಕ್ಷ ಆದಾಯ ಬರುತ್ತಿದೆ. ಕಾಲೇಜುಗಳು ಈಗಷ್ಟೇ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳೂ ಪ್ರಯಾಣಿಸಲು ಆರಂಭಿಸಿದರೆ ಒಟ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದು.

ADVERTISEMENT

ಅತ್ಯುತ್ತಮ ಸಾರಿಗೆ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ನೀಡುವ ‘ಬೆಸ್ಟ್‌ ಅರ್ಬನ್‌ ಮಾಸ್ ಟ್ರಾನ್ಸಿಟ್ ಪ್ರಾಜೆಕ್ಟ್‌– 2019’ ಪ್ರಶಸ್ತಿ ಸಿಕ್ಕಿರುವುದು ‘ಚಿಗರಿ’ಗೆ ‘ಕೊಂಬು’ ಮೂಡಿಸಿದೆ. ಬೆಂಗಳೂರು– ಚೆನ್ನೈನ ಮೆಟ್ರೊ ರೈಲು ಸಾರಿಗೆ ವ್ಯವಸ್ಥೆಯನ್ನು ಹಿಂದಿಕ್ಕಿ ಈ ಪ್ರಶಸ್ತಿ ದಕ್ಕಿಸಿಕೊಂಡಿರುವುದು ಕಡಿಮೆ ಸಾಧನೆ ಏನಲ್ಲ.

ಐಶಾರಾಮಿ ಕಾರಿನಲ್ಲಿದ್ದಂತೆ

‘ನಾನು ಇದೇ ಮೊದಲ ಬಾರಿಗೆ ‘ಚಿಗರಿ’ ಬಸ್‌ನಲ್ಲಿ ಸಂಚರಿಸಿದೆ. ವೇಗ, ಎ.ಸಿ ನೋಡಿದರೆ ಐಶಾರಾಮಿ ಕಾರಿನಲ್ಲಿ ಕುಳಿತಂತೆ ಭಾಸವಾಯಿತು’ ಎಂದು ದೇವರಹುಬ್ಬಳ್ಳಿಯ ಮಂಜುನಾಥ ಅಂಗಡಿ ಪ್ರತಿಕ್ರಿಯಿಸಿದರು.

ಅಗ್ರಸ್ಥಾನ

‘ಕೊರೊನಾ ಲಾಕ್‌ಡೌನ್‌ ನಂತರ ಅವಳಿ ನಗರದ ಬಿಆರ್‌ಟಿಎಸ್‌ ಚೇತರಿಸಿಕೊಂಡಿದೆ. ಇತರ ನಗರಗಳಲ್ಲಿರುವ ಬಿಆರ್‌ಟಿಎಸ್‌ಗಿಂತಲೂ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಸದ್ಯಕ್ಕೆ ಅಗ್ರಸ್ಥಾನ ಸ್ಥಾನಕ್ಕೇರಿದೆ’ ಎಂದು ಹುಬ್ಬಳ್ಳಿ– ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ಕೆಂಪಣ್ಣ ಗುಡೆನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಆರ್‌ಟಿಎಸ್‌ ಬಸ್‌ ನಿಲ್ದಾಣಗಳ ಬಳಿ ಪ್ರಯಾಣಿಕರ ಬೈಕ್‌, ಕಾರ್‌ ಪಾರ್ಕಿಂಗ್‌ ಮಾಡಲು ಜಾಗ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ. ಬಸ್‌ ನಿಲ್ದಾಣಗಳಿಂದ ದೂರ ವಾಸವಿರುವವರು ನಿಲ್ದಾಣಗಳವರೆಗೆ ತಮ್ಮ ವಾಹನಗಳಲ್ಲಿ ಬಂದು, ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿ ಬಸ್‌ ಏರಲು ಅನುಕೂಲ ಮಾಡಿಕೊಡಬೇಕೆನ್ನುವುದು ಇದರ ಉದ್ದೇಶ. ಇದು ಸಾಕಾರವಾದರೆ, ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.