ಹುಬ್ಬಳ್ಳಿ: ಕಾಶ್ಮೀರ ಮೂಲದ ವಿದ್ಯಾರ್ಥಿಗಳ ವಿರುದ್ಧ ನಗರದ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್, ತಾಂತ್ರಿಕ ಕಾರಣ ನೀಡಿ ಧಾರವಾಡ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಹಸ್ತಾಂತರಿಸಿದೆ.
ಆರೋಪಿ ವಿದ್ಯಾರ್ಥಿಗಳು ಹುಬ್ಬಳ್ಳಿ ತಾಲ್ಲೂಕಿನ ಕೊಟಗುಣಸಿಯ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿಡಿಯೊ ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ವಸತಿ ನಿಲಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ಹಸ್ತಾಂತರಿಸಲಾಗಿದೆ.
ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ನಾಲ್ಕು ದಿನಗಳಿಂದ ಪೊಲೀಸರಿಗೆ ಬಿಡುವಿಲ್ಲದ ಕೆಲಸ ಹತ್ತಿತ್ತು. ಜೊತೆಗೆ ಆರಂಭದಲ್ಲಿ ಆರೋಪಿಗಳನ್ನು ಸ್ಟೇಷನ್ ಬೇಲ್ ಪಡೆದು ಬಿಟ್ಟಿದ್ದರಿಂದ ಪೊಲೀಸರ ನಡೆ ಟೀಕೆಗೆ ಒಳಗಾಗಿತ್ತು. ಆರೋಪಿಗಳನ್ನು ಕರೆದೊಯ್ಯುವಾಗಲೂ ಹಲ್ಲೆ ನಡೆಸಿದ್ದು, ಇಲಾಖೆಯನ್ನು ಮುಜುಗರಕ್ಕೆ ಈಡು ಮಾಡಿತ್ತು.
ಗ್ರಾಮೀಣ ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸುವ ಮೂಲಕ ಪೊಲೀಸ್ ಕಮಿಷನರೇಟ್ ಸಿಬ್ಬಂದಿ ತುಸು ನಿರಾಳವಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.