ADVERTISEMENT

ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ ಪ್ರಕರಣ | ಸಿಸೋಡಿಯಾಗೆ ಶಿಕ್ಷೆ ಖಚಿತ: ಜೋಶಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 13:34 IST
Last Updated 30 ಆಗಸ್ಟ್ 2022, 13:34 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ    

ಹುಬ್ಬಳ್ಳಿ: ‘ದೆಹಲಿಯಲ್ಲಿ ಅಬಕಾರಿ ನೀತಿ ಜಾರಿಯಲ್ಲಿ ನಡೆದಿರುವ ಅಕ್ರಮ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಶಿಕ್ಷೆಗೊಳಗಾಗುವುದು ಖಚಿತ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ವಿರುದ್ಧ ಬಲವಾದ ಸಾಕ್ಷ್ಯಗಳಿವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಭ್ರಷ್ಟಾಚಾರ ಮಾಡಿರುವುದು ಅವರ ನಿರ್ಲಜ್ಜತನಕ್ಕೆ ಸಾಕ್ಷಿಯಾಗಿದೆ. ಶಿಕ್ಷೆಗೊಳಗಾಗುವ ಭಯದಿಂದ ಇಡೀ ಪ್ರಕರಣವನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ, ಹೊಸ ನಾಟಕ ಶುರು ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು

‘ದೆಹಲಿಯಲ್ಲಿ ನಮ್ಮವರು ಕೇವಲ 8 ಶಾಸಕರಿದ್ದಾರೆ. ಎಎಪಿ ಸರ್ಕಾರವನ್ನು ಕೆಡವಿ ನಾವು ಸರ್ಕಾರ ರಚಿಸಬೇಕಾದರೆ, ಆ ಪಕ್ಷದ 32 ಶಾಸಕರು ಬರಬೇಕಾಗುತ್ತದೆ. ಅದು ಸಾಧ್ಯವೇ ಇಲ್ಲ. ಅವರು ಬಾರದ ಹೊರತು ಸರ್ಕಾರ ರಚನೆಗೆ ನಾವು ಕೈಹಾಕಲ್ಲ. ಮುಖ್ಯಮಂತ್ರಿ ಅರರವಿಂದ ಕೇಜ್ರಿವಾಲ್ ದೊಡ್ಡ ನಾಟಕಕಾರ. ಅವರು ರಾಜಕಾರಣದಲ್ಲಿರುವ ಬದಲು ನಾಟಕ ಕಂಪನಿಯಲ್ಲಿರಬೇಕಿತ್ತು’ ಎಂದರು.

ADVERTISEMENT

‘ಎಎಪಿ ಸರ್ಕಾರದ ಸಚಿವರೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೈಕೋರ್ಟ್‌ನಲ್ಲೂ ಅವರಿಗೆ ಜಾಮೀನು ಸಿಕ್ಕಿಲ್ಲ. ಆದರೂ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದು ನಾಚಿಗೇಡಿತನದ ಪರಮಾವಧಿ ಇದು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.