ADVERTISEMENT

ಧಾರವಾಡ | 'ಮಕ್ಕಳ ಸರ್ವಾಂಗೀಣ ಬೆಳವಣಿಗೆ ಎಲ್ಲರ ಹೊಣೆ'

ಮಕ್ಕಳ ವಿಶೇಷ ಗ್ರಾಮ ಸಭೆ: ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:57 IST
Last Updated 19 ನವೆಂಬರ್ 2025, 2:57 IST
ಧಾರವಾಡ ತಾಲ್ಲೂಕಿನ ಮಾದನಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು
ಧಾರವಾಡ ತಾಲ್ಲೂಕಿನ ಮಾದನಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು   

ಧಾರವಾಡ: ‘ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಅವರ ಭವಿಷ್ಯ ಕೇವಲ ಶಾಲೆಯ ಹೊಣೆಯಲ್ಲ. ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮಕ್ಕಳ ಗ್ರಾಮಸಭೆ ಸಹಕಾರಿಯಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಮಾದನಭಾವಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ತಾಲ್ಲೂಕಿನ ಮಾದನಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 2025-26 ನೇಸಾಲಿನ ಮಕ್ಕಳ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ತಮ್ಮ ಹಕ್ಕು, ಅಗತ್ಯ ಸೌಲಭ್ಯಗಳನ್ನು ಕೇಳುವ ಮುಕ್ತ ವಾತಾವರಣ ಇರಬೇಕು. ಇದರಿಂದ ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ. ಪ್ರಶ್ನೆ ಕೇಳುವ ಮನೋಭಾವ ಬೆಳೆಸಬೇಕು. ಇಂದಿನ ಸಭೆಯಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಸಹಜ ನ್ಯಾಯಯುತ ಬೇಡಿಕೆಗಳಾಗಿವೆ. ಅಧಿಕಾರಿಗಳು ಪರಿಹರಿಸಬೇಕು' ಎಂದು ಸೂಚನೆ ನೀಡಿದರು.

ADVERTISEMENT

‘ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರವು ಜಿಲ್ಲೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನವೆಂಬರ್ 14 ರಿಂದ ಜನವರಿ 21ರವರೆಗೆ ಮಕ್ಕಳ ಸ್ನೇಹಿ ಅಭಿಯಾನ ಹಮ್ಮಿಕೊಂಡಿದೆ. ಮಾದನಭಾವಿ ಗ್ರಾಮ ಪಂಚಾಯಿತಿಯಿಂದ ಅಭಿಯಾನ ಆರಂಭಿಸಲಾಗಿದೆ. ಶಾಲಾ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವುದು ಗ್ರಾಮ ಪಂಚಾಯಿತಿ ಕರ್ತವ್ಯವಾಗಿದೆ. ಲಭ್ಯ ಅನುದಾನ ಬಳಸಿಕೊಂಡು, ಸಮಸ್ಯೆ ಪರಿಹರಿಸಬೇಕು. ಕ್ರಿಯಾಯೋಜನೆಯಲ್ಲಿ ಶಾಲಾ ಸುಧಾರಣೆ ಹಾಗೂ ಮಕ್ಕಳ ಮೂಲಸೌಕರ್ಯಗಳಿಗೆ ಒತ್ತು ನೀಡಬೇಕು' ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್‌ ಪಾಟೀಲ ಮಾತನಾಡಿ, ‘ಗ್ರಾಮದ ಪರಿಸರ ಆರೋಗ್ಯಕರವಾಗಿರಲು ಸಾರ್ವಜನಿಕರು ಪಂಚಾಯಿತಿ ಜೊತೆ ಸಹಕರಿಸಬೇಕು. ಶಾಲೆಯ ನವೀಕರಣ, ಕ್ರೀಡಾಂಗಣ ಅಭಿವೃದ್ಧಿ, ಶುದ್ಧ ನೀರು, ಸಿಸಿಟಿವಿ ಕ್ಯಾಮರಾ, ವಿದ್ಯುತ್ ವ್ಯವಸ್ಥೆ, ರಸ್ತೆ, ಶಾಲಾ ಆವರಣ ಸ್ವಚ್ಛತೆ, ಮಕ್ಕಳಿಗೆ ಸುರಕ್ಷಿತ, ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ಮಕ್ಕಳು ಗಮನಸೆಳೆದಿದ್ದಾರೆ. ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸೇರಿಕೊಂಡು ನಿರ್ವಹಣೆ ಮಾಡುತ್ತವೆ’ ಎಂದು ಹೇಳಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮಲಾಪುರ, ಕಲೆ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ರವೀಂದ್ರ ದ್ಯಾಬೇರಿ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ಕುಮಾರ್ ಕೆ.ಎಫ್ ಅವರು ಮಕ್ಕಳ ವಿಶೇಷ ಗ್ರಾಮ ಸಭೆಯ ಯೋಜನೆಗಳ ಕುರಿತು, ಮಕ್ಕಳ ಯೋಜನೆಗಳ ಕುರಿತು ಉಪನ್ಯಾಸ ನೀಡಿದರು.

ಮಾದನಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಎಸ್.ಎಸ್.ಕೆಳದಿಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಚ್.ಎಚ್.ಕುಕನೂರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಂ.ಹೊನಕೇರಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಕೆ.ಎನ್.ತನುಜಾ ಮಾದನಭಾವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾದೇವಿ ಹಿರೇಮಠ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಕುಂಬಾರ ಇದ್ದರು.

ಧಾರವಾಡ ತಾಲ್ಲೂಕಿನ ಮಾದನಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದರು 
ಮಕ್ಕಳು ದೇಶದ ಆಸ್ತಿಯಾಗಿದ್ದು ಪಠ್ಯಕ್ಕೆ ಸೀಮಿತವಾಗದೆ ಸೃಜನಶೀಲ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನಹರಿಸಬೇಕು. ಗ್ರಾಮಸಭೆ ಮಕ್ಕಳ ಮುಖ್ಯ ವೇದಿಕೆಯಾಗಿದೆ ರಿತೀಕಾ
ವರ್ಮಾ ಪ್ರೊಬೇಷನರಿ ಐಎಎಸ್ ಅಧಿಕಾರಿ (ಪಿಡಿಒ) ಮಾದನಭಾವಿ 

ವಿದ್ಯಾರ್ಥಿಗಳ ಅಹವಾಲುಗಳು ಪುಂಡರು ರಾತ್ರಿ ಹೊತ್ತಿನಲ್ಲಿ ಶಾಲೆ ಆವರಣದಲ್ಲಿ ಮದ್ಯಪಾನ ಧೂಮಪಾನ ಮಾಡುತ್ತಾರೆ. ಶಾಲೆ ಆವರಣದಲ್ಲಿ ಬಾಟಲಿ ಸಿಗರೇಟು ಪೊಟ್ಟಣ ಬಿಸಾಕುತ್ತಾರೆ. ಅದರಿಂದ ನಮಗೆ ತೊಂದರೆಯಾಗಿದೆ. ಕಣ್ಗಾವಲಿಗೆ ಶಾಲೆಯಲ್ಲಿ ಸಿಸಿ ಟಿವಿ ಅಳವಡಿಸಬೇಕು. ವಿಠ್ಠಲ ಒಡೆಯರ ಮತ್ತು ನಿಖಿತಾ ಮಂಜುನಾಥ ಕೇರಾಳಿ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಗಣಿತ ವಿಜ್ಞಾನ ಪ್ರಯೋಗಾಲಯ ವ್ಯವಸ್ಥೆ ಮಾಡಬೇಕು. ಗ್ರಂಥಾಲಯಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು. ಸ್ಪೂರ್ತಿ ವಿ. ಮಟಗೊಡ್ಲಿ ವಿದ್ಯಾರ್ಥಿನಿ ಶಾಲೆ ಆವರಣಕ್ಕೆ ದನಗಳು ಬರುತ್ತವೆ. ಪಾಠ ಕೇಳುವಾಗ ಸಮಸ್ಯೆಯಾಗುತ್ತದೆ. ಶಾಲೆ ಕಡೆ ತಿಪ್ಪೆ ಹಾಕಿದ್ದಾರೆ. ಈ ಸಮಸ್ಯೆ ಪರಿಹರಿಸಿ. ಮಹೇಶ್ವರಿ ಜೋಗಿ ವಿದ್ಯಾರ್ಥಿನಿ ಬೋಗುರದಿಂದ ಶಾಲೆಗೆ ಬರ್ತಿನ್ರಿ. ಸಂಜೆ ಹೆಚ್ಚುವರಿ ಕ್ಲಾಸ್ ಇದ್ದಾಗ ಮುಗಿಸಿಕೊಂಡು ಊರಿಗೆ ತೆರಳಲು ಬಸ್‌ಗೆ ಕಾಯಬೇಕಾದ ಸ್ಥಿತಿ ಇದೆ. ಬಸ್‌ ತಡಕೋಡ ಗ್ರಾಮಕ್ಕೆ ಹೋಗಿ ಬರುವುದರಿಂದ ಲೇಟಾಗುತ್ತದೆ. ಸಂಜೆ ಬಸ್‌ ವ್ಯವಸ್ಥೆ ಮಾಡಿಕೊಡಿ ಸೌಂದರ್ಯ ಕಲ್ಲೇದ ವಿದ್ಯಾರ್ಥಿನಿ ಶಾಲೆಯಲ್ಲಿ ಬಾಲಕರ ಶೌಚಾಲಯ ಒಂದೇ ಇದೆ. 72 ಜನ ಒಂದೇ ಶೌಚಾಲಯದಲ್ಲಿ ಹೋಗುತ್ತೇವೆ. ಇನ್ನೊಂದು ಶೌಚಾಲಯ ನಿರ್ಮಿಸಬೇಕು. ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಡಬೇಕು. ಶಿವಾನಂದ ಶಿಬಾರಗಟ್ಟಿ ವಿದ್ಯಾರ್ಥಿನಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.