
ಧಾರವಾಡ: ಕ್ರಿಸ್ಮಸ್ ಹಬ್ಬವನ್ನು ನಗರ ಸಹಿತ ಜಿಲ್ಲೆಯ ವಿವಿಧೆಡೆ ಗುರುವಾರ ಸಂಭ್ರಮದಿಂದ ಆಚರಿಸಿದರು.
ಕ್ರಿಶ್ಚಿಯನ್ ಸಮುದಾಯದವರು ಚರ್ಚ್ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬೈಬಲ್ ಪಠಿಸಿದರು. ಕೆರೊಲ್ ಗೀತೆಗಳನ್ನು ಹಾಡಿದರು. ಬಿಷಪ್, ಫಾದರ್ ಅವರು ಹಬ್ಬದ ಸಂದೇಶ ನೀಡಿದರು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕೇಕ್ ತಿಂದು ಸಂಭ್ರಮಿಸಿದರು.
ಹಬ್ಬದ ಅಂಗವಾಗಿ ಕ್ರಿಶ್ಚಿಯನ್ ಸಮುದಾಯದವರ ಮನೆಗಳಲ್ಲಿ ಕೇಕ್, ಚಕ್ಕುಲಿ, ರವೆ ಉಂಡಿ, ಅವಲಕ್ಕಿ ಮೊದಲಾದ ಭಕ್ಷ್ಯಗಳನ್ನು ತಯಾರಿಸಿದ್ದರು. ಕುಟುಂಬದವರೊಂದಿಗೆ ಸವಿದರು. ನೆರೆಹೊರೆಯವರಿಗೂ ಹಂಚಿದರು.
ನಗರದ ಹೆಬಿಕ್ ಮೆಮೊರಿಯಲ್ ಚರ್ಚ್, ಸೇಂಟ್ ಜೋಸೆಫ್ ಚರ್ಚ್, ಹೋಲಿ ಕ್ರಾಸ್ ಚರ್ಚ್, ನಿರ್ಮಲ ನಗರ, ಕಲ್ಯಾಣ ನಗರದ ಚರ್ಚ್ಗಳು ಸಹಿತ ಎಲ್ಲ ಚರ್ಚ್ಗಳು ವಿದ್ಯುತ್ ದೀಪಾಲಂಕರದಿಂದ ಕಂಗೊಳಿಸಿದವು. ಹೆಬಿಕ್ ಸ್ಮಾರಕ ದೇವಾಲಯದಲ್ಲಿ ಯೇಸು ಕಿಸ್ತ ಅವರ ಜನ್ಮ ವೃತ್ತಾಂತ ಸಾರುವ ಗೋದಲಿ ನಿರ್ಮಿಸಲಾಗಿತ್ತು. ಹಲವರು ಗೋದಲಿ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಮೊಂಬತ್ತಿ ಬೆಳಗಿಸಿದರು.
ಹೆಬಿಕ್ ಸ್ಮಾರಕ ಚರ್ಚ್ ಫಾದರ್ ಸಾಮವೆಲ್ ಕ್ಯಾಲ್ವಿನ್ ಅವರು, ‘ಯೇಸು ಕ್ರೀಸ್ ಅವರ ಅವರ ತತ್ವಗಳನ್ನು ಪಾಲಿಸಬೇಕು. ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಸಹೋದರತೆಯಿಂದ ಬದುಕಬೇಕು’ ಎಂದು ಸಂದೇಶ ನೀಡಿದರು.