ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣಗೊಳ್ಳುತ್ತಿರುವ ಇಂದಿರಾ ಗಾಜಿನಮನೆ ಹಾಗೂ ಮಹಾತ್ಮಗಾಂಧಿ ಉದ್ಯಾನದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕೆಲಸ ಚುರುಕುಗೊಳಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗುತ್ತಿಗೆದಾರರಿಗೆ ಸೂಚಿಸಿದರು.
ಶನಿವಾರ ಕಾಮಗಾರಿ ಪರಿಶೀಲಿಸಿದ ಅವರು ‘ಲಾಕ್ಡೌನ್ ತೆರವಿನ ಬಳಿಕ ಎಲ್ಲ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಇಂದಿರಾ ಗಾಜಿನಮನೆ ಮತ್ತು ಉದ್ಯಾನ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ಸಬೂಬು ಹೇಳುವುದನ್ನು ಬಿಟ್ಟು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಹೊಸದಾಗಿ ಏನು ಕೆಲಸವಾಗಿದೆ ಎಂಬುದೇ ಗೊತ್ತಾಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸ್ಕೇಟಿಂಗ್ ರಿಂಕ್ ನಿರ್ಮಾಣ ಕೆಲಸ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಹಾಳಾದ ಸಣ್ಣ ಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪಾಲಿಕೆಗೆ ಉದ್ಯಾನ ಹಸ್ತಾಂತರಸಬೇಕು. ಉದ್ಯಾನದಲ್ಲಿ ದೊಡ್ಡದಾದ ಗಾಂಧಿ ಪ್ರತಿಮೆ ಸ್ಥಾಪಿಸಬೇಕು’ ಎಂದು ಸೂಚಿಸಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ₹ 4.63 ಕೋಟಿ ವೆಚ್ಚದ ಮಕ್ಕಳ ರೈಲು, ₹ 4.62 ಕೋಟಿ ವೆಚ್ಚದ ಸಂಗೀತ ಕಾರಂಜಿ, ₹ 4.56 ಕೋಟಿ ವೆಚ್ಚದ ಪಜಲ್ ಪಾರ್ಕಿಂಗ್ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ, ವಾಯು ವಿಹಾರ ಸಂಘದ ಸದಸ್ಯರು, ಗುತ್ತಿಗೆದಾರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.