ಹುಬ್ಬಳ್ಳಿ: ‘ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಪಾಕಿಸ್ತಾನದ ಏಜೆಂಟರಾಗಿದ್ದು, ಅವರದ್ದೇ ಒಂದು ನಿಯೋಗ ಪಾಕಿಸ್ತಾನಕ್ಕೆ ಕೊಂಡೊಯ್ದು ಭಾರತ ದಾಳಿ ಮಾಡಿರುವ ಸ್ಥಳಗಳನ್ನು ನೋಡಿಕೊಂಡು ಬರಲಿ’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ಆಪರೇಷನ್ ಸಿಂಧೂರ ಕುರಿತು ಕಾಂಗ್ರೆಸ್ ನಾಯಕರು ಅವಹೇಳನ ಮಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಶನಿವಾರ ನಗರದಲ್ಲಿ ಮಾಧ್ಯಮಗಳ ಎದುರು ಅವರ ವಿರುದ್ಧ ಹರಿಹಾಯ್ದರು.
‘ಪಾಕಿಸ್ತಾನದ ಉಗ್ರರ ಹಾಗೂ ವಾಯು ನೆಲೆಗಳ ಮೇಲೆ ಭಾರತ ದಾಳಿ ನಡೆಸಿರುವುದನ್ನು ವಿದೇಶಗಳ ಮಾಧ್ಯಮಗಳು ಸಾಕ್ಷಿ ಸಮೇತ ಸುದ್ದಿ ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸಹ ಅದನ್ನೇ ದಾಳಿ ನಡೆಸಿರುವ ಸ್ಥಳಗಳ ಬಗ್ಗೆ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅವುಗಳ ಸತ್ಯಾಸತ್ಯತೆಗೆ ಕಾಂಗ್ರೆಸ್ ನಿಯೋಗ ಹೋಗಿ ಪರಿಶೀಲನೆ ಮಾಡಿ ಬರಲಿ. ಹೇಗಿದ್ದರೂ ಅವರು ಪಾಕಿಸ್ತಾನದ ಏಜೆಂಟರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜವಾಹರಲಾಲ್ ನೆಹರೂ ಪ್ರಧಾನಮಂತ್ರಿ ಆಗಿದ್ದಾಗಲೂ ಯುದ್ಧ ನಡೆದಿತ್ತು. ಆಗ ಅವರು ಯದ್ಧ ನಡೆದ ಗಡಿ ಪ್ರದೇಶಕ್ಕೆ ತೆರಳಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಗಡಿಗೆ ಹೋಗಿ, ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಸೈನಿಕರ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಗಾಂಧೀಜಿ ಇದ್ದಿದ್ದರೆ, ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಿ, ₹55 ಸಾವಿರ ಕೋಟಿ ನೀಡುವಂತೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು’ ಎಂದು ವ್ಯಂಗ್ಯವಾಡಿದರು.
‘ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ ಲಾಡ್, ಶಾಸಕ ಮಂಜುನಾಥ ಅವರಿಗೆ ಸಾಮಾನ್ಯ ಜ್ಞಾನ ಮತ್ತು ದೇಶ ಭಕ್ತಿಯೇ ಇಲ್ಲ. ದೇಶಕ್ಕಿಂತ ಅವರಿಗೆ ಮುಸ್ಲಿಮ್ ವೋಟ್ ಬ್ಯಾಂಕ್ ಹಾಗೂ ರಾಜಕಾರಣ ಹೆಚ್ಚಾಗಿದೆ. ಭಾರತ ವಿಭಜನೆಯಾಗುವುದಕ್ಕಿಂತ ಮೊದಲು ಸಹ ಕಾಂಗ್ರೆಸ್ ಇದನ್ನೇ ಮಾಡಿತ್ತು. ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಗಾಂಧೀಜಿ ಮತ್ತು ನೆಹರೂ ಅವರ ಮಾತು ಕೇಳಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ’ ಎಂದು ಹೇಳಿದರು.
ವೋಟ್ ಬ್ಯಾಂಕ್ಗಾಗಿ ಹೇಳಿಕೆ ನೀಡುವ ಪ್ರಿಯಾಂಕ್ ಖರ್ಗೆ ಅವರದ್ದು ದೇಶಕ್ಕೆ ಕೊಡುಗೆ ಏನಿದೆ? ಯೌವ್ವನ, ಅಧಿಕಾರಿ ಮತ್ತು ಹಣದಿಂದಾಗಿ ದೇಶದ ವಿರುದ್ಧ ಮಾತನಾಡುತ್ತಿದ್ದಾರೆ
–ಬಸನಗೌಡ ಪಾಟೀಲ ಯತ್ನಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.