ADVERTISEMENT

ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಕಾಂಗ್ರೆಸ್‌ ಧರಣಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:03 IST
Last Updated 20 ಜುಲೈ 2019, 14:03 IST

ಧಾರವಾಡ: ಗುಂಪು ಘರ್ಷಣೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಧರಣಿ ನಡೆಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಹಾಗೂ ಪಂಡಗಳ ವಿಭಾಗದಿಂದ ನಗರದ ಎರಡು ಕಡೆ ಧರಣಿ ನಡೆಸಿದರು.

‘ಉತ್ತರ ಪ್ರದೇಶದ ಸೋಮಭದ್ರದತ್ತ ಜಿಲ್ಲೆಯ ಉಂಭಾ ಗ್ರಾಮದಲ್ಲಿ ಘೋರವಾಲ್ ಎಂಬಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆಯಲ್ಲಿ 10 ಜನ ಮೃತಪಟ್ಟಿದ್ದರು. 28ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಈ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಗ್ರಾಮಕ್ಕೆ ಭೇಟಿ ನೀಡಲು ತೆರಳಿದ್ದಾಗ, ಅಲ್ಲಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ. ಇದು ಖಂಡಿನೀಯ ಕ್ರಮವಾಗಿದೆ’ ಎಂದು ಆರೋಪ ಮಾಡಿದರು.

ADVERTISEMENT

‘144 ಕಲಂ ಜಾರಿ ಇರುವುದರಿಂದ ನಾಲ್ಕು ಜನಕ್ಕೆ ಮಾತ್ರ ಒಳಗೆ ಬಿಡಲು ಪ್ರಿಯಾಂಕಾ ಗಾಂಧಿ ತಿಳಿಸಿದ್ದರು. ಹೀಗಿದ್ದರೂ ಪೊಲೀಸರು ಇವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಈ ಕೃತ್ಯ ಭಾರತೀಯ ಸಂಸ್ಕೃತಿಗೆ ಮಾಡಿದ ಅಪಮಾನವಾಗಿದೆ’ ಎಂದು ಧರಣಿ ನಿರತರು ಟೀಕಿಸಿದರು.

ಪ್ರತಿಭಟನೆಯಲ್ಲಿ ರಾಣಿ ಚನ್ನಮ್ಮ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಕಾರಿ, ಬಸಪ್ಪ ಕಿತ್ತೂರ, ಕೆಪಿಸಿಸಿ ಸದಸ್ಯ ರಾಬರ್ಟ್‌ ದದ್ದಾಪುರಿ, ಎಫ್‌.ಎಚ್.ಜಕ್ಕಪ್ಪನವರ, ಆನಂದ ಜಾಧವ, ಶರಣಪ್ಪ ಕೊಟಗಿ, ಅಲ್ತಾಫ್ ಹಳ್ಳೂರ, ಆನಂದ ಸಿಂಗನಾಥ್, ಅಬ್ದುಲ್ ದೇಸಾಯಿ, ದಾಕ್ಷಾಯಿಣಿ ಬಸವರಾಜ, ಹಿಂದುಳಿದ ವರ್ಗಗಳ ಅಧ್ಯಕ್ಷ ಹೇಮಂತ ಗುರ್ಲಹೂಸೂರ, ಪೂಜಾ ಹಳಿಯಾಳ, ಗೌರಿ ನಾಡಗೌಡ, ನಾಗರಾಜ ಗೌರಿ, ಗ್ರೇಗರೆ ಝೇವಿಯರ್, ಸುಮಾ ಮೇಘನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.