ಕೆಮ್ಮಿನ ಸಿರಪ್
ಪಿಟಿಐ ಚಿತ್ರ
ಹುಬ್ಬಳ್ಳಿ: ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ, ಮುಂಜಾಗ್ರತೆಯಾಗಿ ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆಯಲ್ಲಿ ಮಕ್ಕಳಿಗೆ ಸಿರಪ್ ನೀಡುವುದನ್ನು ನಿಲ್ಲಿಸಲಾಗಿದೆ.
ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ಮಕ್ಕಳ ವಿಭಾಗದ ವೈದ್ಯರಿಗೆ ಸೂಚನೆ ನೀಡಿದೆ. ಯಾವುದೇ ಕಂಪನಿಯ ಸಿರಪ್ ಅನ್ನು ಎರಡು ವರ್ಷದ ಒಳಗಿನ ಮಕ್ಕಳಿಗೆ ನೀಡಬಾರದು ಎಂದು ತಿಳಿಸಿದೆ.
‘ಸಿರಪ್ ಸೇವನೆಯಿಂದ ಮಕ್ಕಳಿಗೆ ವ್ಯತಿರಿಕ್ತ ಪರಿಣಾಮ ಉಂಟಾದ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಮುಂಜಾಗ್ರತೆಯಾಗಿ ನಾವು ಸಿರಪ್ ನೀಡುತ್ತಿಲ್ಲ. ಸದ್ಯ ಮಾತ್ರೆಗಳನ್ನಷ್ಟೇ ನೀಡುವಂತೆ ಮಕ್ಕಳ ತಜ್ಞರಿಗೆ ತಿಳಿಸಲಾಗಿದೆ’ ಎಂದು ಕೆಎಂಸಿ–ಆರ್ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಈಶ್ವರ ಹಸಬಿ ತಿಳಿಸಿದರು.
‘ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೋಲ್ಡ್ರಿಫ್ ಸಿರಪ್ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಆಗುತ್ತಿಲ್ಲ. ಖಾಸಗಿ ಔಷಧ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆಯೇ ಎಂದೂ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿಯೂ ಆ ಸಿರಪ್ ಮಾರಾಟವಾಗುತ್ತಿಲ್ಲ’ ಎಂದು ಧಾರವಾಡ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಸಂಜಯ್ ಮುದಗಲ್ ಹೇಳಿದರು.
‘ಶೀತ, ಜ್ವರ, ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳನ್ನು ನಗರದ ಕ್ಲಿನಿಕ್, ಖಾಸಗಿ, ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ಪಾಲಕರು, ಸಿರಪ್ ಬದಲು ಮಾತ್ರೆ ನೀಡುವಂತೆ ವಿನಂತಿಸುತ್ತಿದ್ದಾರೆ. ವಯಸ್ಕರು ಸಹ ಸಿರಪ್ ಸೇವಿಸಲು ಭಯ ಪಡುತ್ತಿದ್ದಾರೆ’ ಎಂದು ವೈದ್ಯರೊಬ್ಬರು ಹೇಳಿದರು.
ಮಕ್ಕಳಿಗೆ ನೀಡುವ ಕೆಮ್ಮಿನ ಸಿರಪ್ ಕುರಿತು ಆರೋಗ್ಯ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ. ಕೆಲವು ಆಸ್ಪತ್ರೆಗಳು ಸ್ವಯಂಪ್ರೇರಿತವಾಗಿ ಮಕ್ಕಳಿಗೆ ಸಿರಪ್ ಕೊಡುವುದನ್ನು ನಿಲ್ಲಿಸಿವೆಡಾ.ಎಸ್.ಎಂ. ಹೊನಕೇರಿ ಜಿಲ್ಲಾ ಆರೋಗ್ಯಾಧಿಕಾರಿ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.