ADVERTISEMENT

ಕ್ರಿಕೆಟ್‌: ಸಿಸಿಕೆ ತಂಡಕ್ಕೆ 219 ರನ್‌ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 17:00 IST
Last Updated 20 ಜನವರಿ 2022, 17:00 IST
ಶ್ರೇಯಸ್‌ ಮುರ್ಡೇಶ್ವರ
ಶ್ರೇಯಸ್‌ ಮುರ್ಡೇಶ್ವರ   

ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್‌ಮನ್‌ ಶ್ರೇಯಸ್‌ ಮುರ್ಡೇಶ್ವರ (155, 150ಎಸೆತ, 25ಬೌಂಡರಿ) ಶತಕ ಹಾಗೂ ಸಂತೋಷ ಲಮಾಣಿ (23ಕ್ಕೆ6) ಚುರುಕಿನ ಬೌಲಿಂಗ್‌ ಬಲದಿಂದ ಧಾರವಾಡದ ಸಿಸಿಕೆ ‘ಬಿ’ ತಂಡ, ಕೆಎಸ್‌ಸಿಎ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ 219 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಸಿಕೆ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 309 ರನ್‌ ಗಳಿಸಿತು. ಶ್ರೇಯಸ್‌ ಶತಕದ ಜೊತೆಗೆ ಯಶಸ್‌ ಕುರುಬರ (57) ಅರ್ಧಶತಕ ತಂಡದ ಉತ್ತಮ ಮೊತ್ತಕ್ಕೆ ಕಾರಣವಾಯಿತು. ಎದುರಾಳಿ ಬೆಳಗಾವಿಯ ಇಂಡಿಯನ್‌ ಬಾಯ್ಸ್‌ ತಂಡ 21.2 ಓವರ್‌ಗಳಲ್ಲಿ 90 ರನ್ ಗಳಿಸಿ ಆಲೌಟ್‌ ಆಯಿತು.

ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಳಗಾವಿಯ ವಿಜಯ ಕ್ರಿಕೆಟ್‌ ಅಕಾಡೆಮಿ ನಾಲ್ಕು ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿ ಈ ತಂಡ ಕಲೆಹಾಕಿದ್ದ 84 ರನ್‌ ಗುರಿಗೆ ಉತ್ತರವಾಗಿ ಎದುರಾಳಿ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ 20.1 ಓವರ್‌ಗಳಲ್ಲಿ 80 ರನ್ ಗಳಿಸಿ ಗೆಲುವಿನ ಸನಿಹ ಬಂದು ಆಲೌಟ್‌ ಆಯಿತು. ಬೆಳಗಾವಿಯ ಶುಭಮ್‌ ಭಡ್ವಂಕರ ಆರು ವಿಕೆಟ್‌ ಕಬಳಿಸಿದರು.

ADVERTISEMENT

ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲ್ಲಿನ ನೀನಾ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡ ಆರು ವಿಕೆಟ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ್ದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಬಿ’ 50 ಓವರ್‌ಗಳಲ್ಲಿ ನೀಡಿದ್ದ 237 ರನ್‌ ಗುರಿಯನ್ನು ನೀನಾ ತಂಡ 33.2 ಓವರ್‌ಗಳಲ್ಲಿ ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.