ಹುಬ್ಬಳ್ಳಿ: ‘ಮ್ಯಾಟ್ರಿಮೊನಿ’ಯಲ್ಲಿ ಇಷ್ಟಪಟ್ಟಿದ್ದ ಯುವತಿಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿ ಟೆಕ್ಕಿಯೊಬ್ಬ ನಾಲ್ಕು ದಿನಗಳಿಂದ ಯುವತಿ ಮನೆ ಮುಂದೆ ಧರಣಿ ಕುಳಿತ್ತಿದ್ದ ಪ್ರಕರಣ ಗೋಕುಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚಕ್ರವರ್ತಿ ಎಂಬಾತ ಯುವತಿ ಮನೆ ಮುಂದೆ ಧರಣಿ ಕುಳಿತಿದ್ದ ಯುವಕ. ಮ್ಯಾಟ್ರಿಮೊನಿಯಲ್ಲಿ ಇಬ್ಬರೂ ಪರಸ್ಪರ ಮೆಚ್ಚಿಕೊಂಡಿದ್ದ ಕಾರಣಕ್ಕೆ ಮದುವೆ ಮಾಡಿಕೊಡುವುದಾಗಿ ಯುವತಿ ಕಡೆಯವರು ಆರಂಭದಲ್ಲಿ ಮಾತುಕೊಟ್ಟಿದ್ದರು. ಆದರೆ, ಜಾತಿ ಬೇರೆ ಎಂಬ ಕಾರಣಕ್ಕೆ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರ ಎನ್ನಲಾಗಿದೆ. ಇದರಿಂದ ನೊಂದ ಆತ ಯುವತಿ ಮನೆ ಮುಂದೆ ಧರಣಿ ಕುಳಿತಿದ್ದ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಹುಬ್ಬಳ್ಳಿಗೆ ಶುಕ್ರವಾರ ಬಂದ ಆತನ ಕುಟುಂಬದವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಡ್ನಿಯಲ್ಲಿ ಉದ್ಯೋಗದಲ್ಲಿದ್ದ ಚಕ್ರವರ್ತಿ ಕೆಲಸ ಕಳೆದುಕೊಂಡು ನಿರುದ್ಯೋಗಿಯಾದ ಬಳಿಕ ಮಾನಸಿಕವಾಗಿ ಅಸ್ವಸ್ಥನಾಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.