ADVERTISEMENT

ದಾವಣಗೆರೆಯಲ್ಲಿ 15ರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಾರ್ಷಿಕ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 14:40 IST
Last Updated 5 ಜನವರಿ 2022, 14:40 IST

ಹುಬ್ಬಳ್ಳಿ: ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಾರ್ಷಿಕ ಸಾಮಾನ್ಯ ಸಭೆ ಫೆ. 15 ಹಾಗೂ 16ರಂದು ದಾವಣಗೆರೆಯ ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಲವು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಸಮಿತಿಯು ಕೆಲ ಬಣಗಳಾಗಿತ್ತು. ಕೆಲ ವ್ಯಕ್ತಿಗಳು ಮೂಲ ಸಮಿತಿಯನ್ನೇ ತಮ್ಮದು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದರು. ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಒಂಬತ್ತು ವರ್ಷಗಳ ಕಾಲ ವಿಚಾರಣೆ ನಡೆದು 2021ರ ಮಾರ್ಚ್‌ 24ರಂದು ಎನ್‌.ಗಿರಿಯಪ್ಪ ಮತ್ತು ಎಂ.ಗುರುಮೂರ್ತಿ ಸಮಿತಿಯ ವಾರಸುದಾರರು ನ್ಯಾಯಾಲಯ ಆದೇಶ ನೀಡಿದೆ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಬುದ್ಧಿಜೀವಿಗಳನ್ನು ಸಭೆಗೆ ಆಹ್ವಾನಿಸಿ ಸಂಘಟನೆಯನ್ನು 1980ರ ದಶಕದಲ್ಲಿದ್ದ ಪರಿಣಾಮಕಾರಿಯಾಗಿ ಇದ್ದಂತೆ ಈಗಲೂ ಬೆಳೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಸಮಿತಿಯ ಬಣಗಳಲ್ಲಿ ನಾಲ್ಕು ಸಂಘಟನೆಗಳು 2021ರ ನವೆಂಬರ್‌ನಲ್ಲಿ ಶಿವಮೊಗ್ಗದ ಗಾಜನೂರಿನಲ್ಲಿ ಜರುಗಿದ ಐಕ್ಯತಾ ಸಮಾವೇಶದಲ್ಲಿ ವಿಲೀನವಾದವು. ನಂತರ ವಿವಿಧ ಬಣಗಳ ವಿಲೀನಕ್ಕೆ ಕರೆ ಕೊಡುತ್ತಾ ಸಮಾಲೋಚನಾ ಸಭೆಗಳನ್ನು ಮಾಡುತ್ತಾ ಬರಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಮದನ್‌, ಖಜಾಂಚಿ ಕರಿಯಪ್ಪ ಭದ್ರಾಪುರ, ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಎಸ್‌. ಫಕ್ಕೀರಪ್ಪ, ಶಿವಬಸಪ್ಪ ಭದ್ರಾವತಿ, ಶಿವಬಸಪ್ಪ ಭದ್ರಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.