ಹುಬ್ಬಳ್ಳಿ: ಮಳೆಗಾಲ ಆರಂಭವಾದರೆ ಸಾಕು, ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಮಲೇರಿಯಾ, ಡೆಂಗಿಯ ಹರಡುವ ಆತಂಕ ಕಾಡುತ್ತದೆ. ಈ ಬಾರಿ ಸಮಾಧಾನಕರ ಸಂಗತಿಯೆಂದರೆ, ಡೆಂಗಿ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಿದೆ.
ಕಳೆದ ವರ್ಷ 872 ಡೆಂಗಿ ದೃಢಪಟ್ಟಿದ್ದವು. ಮೊದಲ 6 ತಿಂಗಳಲ್ಲಿ ಜನವರಿ 1ರಿಂದ ಜೂನ್ 30ರವರೆಗೆ 254 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ಈ ವರ್ಷ ಜನವರಿಯಿಂದ ಜೂನ್ವರೆಗೆ ಕೇವಲ 62 ಪ್ರಕರಣ ದೃಢಪಟ್ಟಿವೆ. ಡೆಂಗಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
‘ಈ ವರ್ಷ ಮುಂಗಾರು ಪೂರ್ವ ಅವಧಿಯಲ್ಲಿ ಸುರಿದ ವಿಪರೀತ ಮಳೆಯಿಂದ ಡೆಂಗಿ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇತ್ತು. ಇದನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡೆವು. ಡೆಂಗಿ, ಮಲೇರಿಯಾ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಕಸ ಸಂಗ್ರಹಿಸುವ ವಾಹನಗಳಲ್ಲಿ ಡೆಂಗಿ ಮುನ್ನೆಚ್ಚರಿಕೆಯ ಸಂದೇಶಳ ಪ್ರಚಾರ, ಶಾಲಾ– ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, ದೀರ್ಘ ಕಾಲ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಜೂನ್ ಸೃಷ್ಟಿಸಿದ ಆತಂಕ:
ಈ ವರ್ಷ ಮುಂಗಾರು ಅವಧಿಗೂ ಮುಂಚೆಯೇ ಆರಂಭವಾಗಿತ್ತು. ಇದಲ್ಲದೇ, ಧಾರವಾಡ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರ ಪರಿಣಾಮ ಸೊಳ್ಳೆಗಳ ಸಂಖ್ಯೆ ವಿಪರೀತ ಹೆಚ್ಚಾಗಿ, ಡೆಂಗಿ ಆತಂಕ ಸೃಷ್ಟಿಸಿತ್ತು. ಕಳೆದ ವರ್ಷ ಜೂನ್ ಒಂದೇ ತಿಂಗಳಲ್ಲಿ 134 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ಆರೋಗ್ಯ ಇಲಾಖೆಯ ಕ್ರಮದಿಂದ ಕಳೆದ ತಿಂಗಳು ಜೂನ್ನಲ್ಲಿ ಕೇವಲ 10 ಪ್ರಕರಣಗಳು ದೃಢಪಟ್ಟಿವೆ.
‘ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರು ಕೈಜೋಡಿಸಿದ್ದಾರೆ. ಲಾರ್ವಾ ಸಮೀಕ್ಷೆ ಕಾರ್ಯ ನಿರಂತರ ನಡೆದಿದೆ. ಡೆಂಗಿಗೆ ಕಾರಣ ಆಗುವ ಈಡೀಸ್ ಲಾರ್ವಾ ಸೊಳ್ಳೆ ಪತ್ತೆ ಹಚ್ಚಲಾಗುತ್ತಿದೆ. ಸೊಳ್ಳೆಗಳು ಕಂಡುಬಂದರೆ, ಆ ಪ್ರದೇಶವನ್ನು ಸ್ವಚ್ಛಗೊಳಿಸಲಾಗುವುದು. ಆ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಸಂತಾನೋತ್ಪತ್ತಿ ಮಾಡದಂತೆ ಫಾಗ್ಗಿಂಗ್ ಮಾಡಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಸಮೀಕ್ಷೆಗಾಗಿ ಮನೆಗೆ ಬಂದಾಗ ಜನರು ಸಹಕರಿಸಬೇಕು. ಅಗತ್ಯ ಮಾಹಿತಿಯನ್ನು ನೀಡಬೇಕು. ಸಿಬ್ಬಂದಿಯ ಸಲಹೆ–ಸೂಚನೆ ಪಾಲಿಸಬೇಕು.ಡಾ.ಎಸ್.ಎಂ. ಹೊನಕೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಧಾರವಾಡ
ಸೊಳ್ಳೆ ಕಚ್ಚುವಿಕೆಯಿಂದ ಡೆಂಗಿ:
ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಡೆಂಗಿ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ನೀರಿನ ಶೇಖರಣೆಗಳಾದ ಸಿಮೆಂಟ್ ತೊಟ್ಟಿ ಡ್ರಮ್ಮು ಬ್ಯಾರೆಲ್ ಮಣ್ಣಿನ ಮಡಿಕೆ ಮುಂದಾದ ಕಡೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಿದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ ವಿಪರೀತ ತಲೆನೋವು ಕಣ್ಣುಗಳ ಹಿಂಭಾಗ ನೋವು ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಬಾಯಿ ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸುವುದು ಡೆಂಗಿ ಲಕ್ಷಣಗಳಾಗಿವೆ. ಇವು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.