ಹುಬ್ಬಳ್ಳಿ: ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವುದರ ಜೊತೆಗೆ ಕಲಿಕೋತ್ಸವ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ಪಾಲ್ಗೊಳಿಸುವ ಮೂಲಕ ಅವರ ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಹೇಳಿದರು.
ತಾಲ್ಲೂಕಿನ ಕುಸುಗಲ್ಲ ಗ್ರಾಮದ ಸರ್ಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಹುಬ್ಬಳ್ಳಿ ತಾಲ್ಲೂಕು ಮಟ್ಟದ ‘ನಮ್ಮ ಶಾಲೆ, ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
‘ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಆಗಾಗ ಅವರ ಕಲಿಕಾಮಟ್ಟ ಪರಿಶೀಲಿಸಿ, ಬೋಧಿಸಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಪೋಷಕರು ಬಳಸಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು’ ಎಂದು ಹೇಳಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕೆಂಚಪ್ಪ ಶಿವಳ್ಳಿ ಅವರು, ’ಮಕ್ಕಳ ಕಲಿಕಾ ಮಟ್ಟವನ್ನು ಪರಿಶೀಲಿಸುವಲ್ಲಿ ಶಿಕ್ಷಕರ ಜೊತೆಗೆ ಪೋಷಕರ ಜವಾಬ್ದಾರಿಯೂ ಇದೆ’ ಎಂದರು.
ಕುಸಗಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಸುಂಕದ, ಉಪಾಧ್ಯಕ್ಷೆ ರಾಜಬಿ ಮಿರ್ಜಾನವರ ಹಾಗೂ ಸಂಗಮೇಶ ಬಂಗಾರಿಮಠ ಮಾತನಾಡಿದರು.
ಪ್ರಮುಖರಾದ ಮಹಾಂತೇಶ ಸಂಕರಡ್ಡಿ, ಕಲ್ಲನಗೌಡ ಕೌಜಗೇರಿ, ವಿ.ಎಫ್.ಚುಳಕಿ, ಇಬ್ರಾಹಿಂ ಬೆಟಗೇರಿ, ಎಲ್.ಎಂ.ಕಮಡೊಳ್ಳಿ, ಪಿಡಿಒ ಶಶಿಧರ ಮಂಟೂರ, ಲಲಿತಾ ಹರ್ಲಾಪೂರ, ವಿಜಯಲಕ್ಷ್ಮಿ ಅರ್ಕಸಾಲಿ, ಕಲನಗೌಡ ಹಿತ್ತಲಮನಿ, ಸಂತೋಷ ಲಂಬುಗೊಳ ಭಾಗವಹಿಸಿದ್ದರು.
ಮುಖ್ಯೋಪಾಧ್ಯಾಯ ಶಿವಲೀಲಾ ಕಳಸಣ್ಣವರ ಸ್ವಾಗತಿಸಿದರು. ಸಂಜೀವಕುಮಾರ ಭೂಶೆಟ್ಟಿ ನಿರೂಪಿಸಿದರು. ದುರ್ಗೇಶ ಎಂ. ವಂದಿಸಿದರು. ವಿನೀತ ಭೂಶೆಟ್ಟಿ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.