ಧಾರವಾಡ: ದಸರಾ ಪ್ರಯುಕ್ತ ನಡೆಯುವ ಆಯುಧಪೂಜೆ ಮತ್ತು ವಿಜಯದಶಮಿಗೆ ಜನರು ಪೂಜೆಗೆ ಬೇಕಾದ ಸಾಮಗ್ರಿಗಳು, ಹೂವು-ಹಣ್ಣು ಮೊದಲಾದವುಗಳ ಖರೀದಿ ಮಂಗಳವಾರ ಜೋರಾಗಿತ್ತು.
ಕೆಲ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಸುಭಾಷ ರಸ್ತೆ, ಟಿಕಾರೆ ರಸ್ತೆ, ಅಕ್ಕಿಪೇಟೆ, ರೈಲು ನಿಲ್ದಾಣ ರಸ್ತೆ, ಸಪ್ತಾಪೂರ ಬಾವಿ, ಶ್ರೀನಗರ, ಸೂಪರ್ ಮಾರ್ಕೆಟ್ನಲ್ಲಿ ಜನರು ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು. ನಗರದ ವಿವಿಧೆಡೆ ಹೂವು ಹಣ್ಣು ಮಾರಾಟಕ್ಕಾಗಿ ಅಂಗಡಿಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು.
ದಸರಾ ಅಂಗವಾಗಿ ಕೆಲವು ಮೊಬೈಲ್ ಹಾಗೂ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರಿಗೆ ವಿಜಯದಶಮಿಯ ವಿಶೇಷ ರಿಯಾಯಿತಿ ನೀಡಲಾಗಿತ್ತು. ಇದರಿಂದ ಅಂಗಡಿಗಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.
ಹಬ್ಬದ ಪ್ರಯುಕ್ತ ಚೆಂಡು ಹೂವು ಕೆಜಿಗೆ ₹40 ರಿಂದ ₹50 ಮುಟ್ಟಿದೆ. ವಾರದ ಹಿಂದೆ ಚೆಂಡು ಹೂ ದರ ಕೇವಲ ₹10 ರಿಂದ ₹20 ಇತ್ತು. ಸೇವಂತಿಗೆ ಕೆಜಿಗೆ ₹150, ಕನಕಾಂಬರ ₹700, ಮಲ್ಲಿಗೆ ಮಾರಿಗೆ ₹60 ಕಾಕಡ ₹500, ಅಷ್ಟರ್ ₹200, ಗುಲಾಬಿ ₹400, ಸುಗಂಧರಾಜ ₹400 ದರದಲ್ಲಿ ಮಾರಾಟವಾಯಿತು.
ಸೇಬು ಕೆಜಿಗೆ ₹160 ಪೇರಳೆ ₹100, ಏಲಕ್ಕಿ ಬಾಳೆಹಣ್ಣು ₹100, ಮೂಸಂಬಿ ₹120, ಕಪ್ಪು ದ್ರಾಕ್ಷಿ ₹150, ಸೀತಾಫಲ ₹100, ದಾಳಿಂಬೆ ₹200, ಚಿಕ್ಕು ಹಣ್ಣು ₹120, ಬೂದುಗುಂಬಳ ಗಾತ್ರದ ಆಧಾರದ ಮೇಲೆ 80 ರಿಂದ 200 ರವರೆಗೆ ಮಾರಲಾಗುತ್ತಿದೆ. ಜೋಡಿ ಕಬ್ಬು ₹50 ಬಾಳೆದಿಂಡಿಗೆ ₹50- ₹100, ಮಾವಿನ ತಳಿರು ಕಟ್ಟಿಗೆ ₹20 ಮಾರಾಟ ಮಾಡಲಾಗುತ್ತಿತ್ತು.
ದಸರಾ ಹಬ್ಬದಲ್ಲಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಯುಧ ಪೂಜೆ ದಿನ ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುತ್ತದೆ ಎಂದು ಹೂವಿನ ವ್ಯಾಪಾರಿ ಕೃಷ್ಣ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.
ಹೂವಿನ ಬೆಲೆ ಜಾಸ್ತಿಯಾಗಿದೆ. ಇದು ಗ್ರಾಹಕರಿಗೆ ಆರ್ಥಿಕವಾಗಿ ಸಾಕಷ್ಟು ಹೊರೆಯಾಗುತ್ತದೆ. ಬೆಲೆ ಏಷ್ಟೇ ಹೆಚ್ಚಾದಾರೂ ಪೂಜೆಗೆ ಅಗತ್ಯವಾದ ನಿರ್ದಿಷ್ಟ ಸಾಮಗ್ರಿಗಳನ್ನು ಕೊಳ್ಳಲೇಬೇಕುಬಸವರಾಜ ಪಾಟೀಲ ಗ್ರಾಹಕ
ನವರಾತ್ರಿ ಆಚರಣೆಯ ವೇಳೆ ಹೂವು ಬೆಲೆ ಜಾಸ್ತಿಯಾಗುವುದು ಸಾಮಾನ್ಯ. ನಾವು ಕೂಡ ಹೆಚ್ಚಿನ ದರ ನೀಡಿ ಖರೀದಿ ಮಾಡುತ್ತೇವೆ. ಬೆಲೆ ಸ್ವಲ್ಪ ಹೆಚ್ಚಾದರೂ ಗ್ರಾಹಕರು ಖರೀದಿಸುತ್ತಾರೆಕೃಷ್ಣಾ ಶಿಂಧೆ ಹೂವಿನ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.