ADVERTISEMENT

ಮಹದಾಯಿ | ಭಯದಿಂದ ರಾತ್ರೋರಾತ್ರಿ ಡಿಪಿಆರ್‌ಗೆ ಅನುಮತಿ: ಸಲೀಂ ಅಹ್ಮದ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 11:06 IST
Last Updated 1 ಜನವರಿ 2023, 11:06 IST
 ಸಲೀಂ ಅಹ್ಮದ್‌
 ಸಲೀಂ ಅಹ್ಮದ್‌   

ಹುಬ್ಬಳ್ಳಿ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ತಮ್ಮ ವಿರುದ್ಧ ನಿಲ್ಲುತ್ತಾರೆ ಎಂದು ಭಯಗೊಂಡು, ಬಿಜೆಪಿ ರಾತ್ರೋರಾತ್ರಿ ಮಹದಾಯಿ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ಅನುಮತಿ ಪಡೆದಿದೆ.

ಜ. 2ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಮಹದಾಯಿ ಜನಾಂದೋಲನ ಸಮಾವೇಶದಲ್ಲಿ ಅವರ ಕಾರ್ಯವೈಖರಿಯನ್ನು ಬೆತ್ತಲು ಮಾಡುತ್ತೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೇ ಮಹದಾಯಿ ಡಿಪಿಆರ್‌ ಸಿದ್ಧವಾಗಿತ್ತು. ನಾವು ಹೋರಾಟ ಮಾಡುತ್ತೇವೆ ಎಂದಾಗ, ತರಾತುರಿಯಲ್ಲಿ ಪರಿಷ್ಕೃತ ಡಿಪಿಆರ್‌ಗೆ ಅನುಮತಿ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಇನ್ನೂ ಪಡೆದಿಲ್ಲ. ಮೊದಲು ಆ ಕೆಲಸ ಪೂರ್ಣಗೊಳಿಸಿ, ಯೋಜನೆ ಅನುಷ್ಠಾನಕ್ಕೆ ಟೆಂಡರ್‌ ಕರೆದು ಕಾಮಗಾರಿ ನಡೆಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಕಾಂಗ್ರೆಸ್‌ ಆಡಳಿತದಲ್ಲಿ ಏನು ಮಾಡಿದೆ’ ಎಂದು ಪ್ರಶ್ನಿಸುವ ಬಿಜೆಪಿ ನಾಯಕರು, ಈಗಿನ ನಾಲ್ಕೂವರೆ ವರ್ಷದ ಆಡಳಿತದಲ್ಲಿ ನೀರಾವರಿ ಯೋಜನೆಗೆ ಏನು ಮಾಡಿದ್ದಾರೆ? ಮಹದಾಯಿ ಮತ್ತು ಮೇಕೆದಾಟು ಯೋಜನೆಗೆ ₹1.50 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದವರು, ಕೇವಲ ₹35 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ. ಗೋವಾ, ಕರ್ನಾಟಕ ಮತ್ತು ಕೇಂದ್ರದಲ್ಲಿ ಇವರದ್ದೇ ಸರ್ಕಾರವಿದ್ದರೂ, ಮಹದಾಯಿ ಯೋಜನೆ ಅನುಷ್ಠಾನ ಯಾಕಾಗಿಲ್ಲ? ಬದ್ಧತೆ ಹಾಗೂ ಇಚ್ಛಾಶಕ್ತಿಯಿಲ್ಲದ ಸರ್ಕಾರ ಇದಾಗಿದೆ. ಚುನಾವಣೆ ದೃಷ್ಟಿಯಿಂದ ಡಿಪಿಆರ್‌ಗೆ ಅನುಮತಿ ಪಡೆದಿದ್ದೇವೆ ಎನ್ನುತ್ತ, ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಸರ್ಕಾರದ ಆಯುಸ್ಸು ನೂರು ದಿನ ಮಾತ್ರ, ಅಷ್ಟರಲ್ಲಿ ಏನೂ ಮಾಡಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.