
ಬೀಳಗಿ: ‘ರೈತ ಜಗದ ಒಡೆಯ. ರೈತನಿಲ್ಲದ ಬದುಕನ್ನು ಊಹಿಸಲೂ ಅಸಾಧ್ಯ. ಭೂಮಿ ತಾಯಿಯನ್ನು ಗೌರವಿಸಬೇಕು, ಪ್ರೀತಿಸಬೇಕು’ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಎಂ. ಹೇಳಿದರು.
ಬಾಡಗಂಡಿ ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ದಿ.ರುದ್ರಗೌಡ ಗುರುಸಿದ್ದಪ್ಪಗೌಡ ಪಾಟೀಲ ಸ್ಮರಣಾರ್ಥ ‘ಕೃಷಿಕ ಪ್ರಶಸ್ತಿ’ ಹಾಗೂ ಈರಮ್ಮತಾಯಿ ರುದ್ರಗೌಡ ಪಾಟೀಲ ಸ್ಮರಣಾರ್ಥ ‘ಅಬ್ಬೆ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸತತ ಪರಿಶ್ರಮ, ಆತ್ಮ ವಿಶ್ವಾಸದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಸೋಲು ಗೆಲುವುಗಳಿಗೆ ತಲೆಕೆಡಿಸಿಕೊಳ್ಳದೆ ನಿರಂತರ ಅಧ್ಯಯನದಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ‘ಪಾಲಕರ ತ್ಯಾಗದಿಂದ ಮಕ್ಕಳು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ. ಎಲ್ಲರೂ ಪಾಲಕರಿಗೆ ಕೀರ್ತಿ ತರುವಂತೆ ನಡೆದುಕೊಳ್ಳಿ’ ಎಂದರು.
ಅಬ್ಬೆ ಪ್ರಶಸ್ತಿ ಪುರಸ್ಕೃತೆ ಮೀನಾಕ್ಷಿ ಬಾಳಿ ಮಾತನಾಡಿ, ‘ಪ್ರಶಸ್ತಿ ಪಡೆಯುವವರಿಗಿಂತ ಕೊಡುವವರ ಯೋಗ್ಯತೆ ಮೇಲೆ ಅದರ ಮೌಲ್ಯ ನಿರ್ಧಾರವಾಗುತ್ತದೆ. ಮೌಲ್ಯಯುತ ಬದುಕು ಸಾಗಿಸಿದ ಎಸ್.ಆರ್. ಪಾಟೀಲ ಅವರು ನನಗೆ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದರು.
ನಾಗಣ್ಣ ವೆಂಕಪ್ಪ ಬಡಿಗೇರ ಅವರಿಗೆ ‘ಕೃಷಿಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎರಡೂ ಪ್ರಶಸ್ತಿಗಳು ₹1ಲಕ್ಷ ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿವೆ.
ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎನ್. ಪಾಟೀಲ, ಆಡಳಿತಾಧಿಕಾರಿ ಎಚ್.ಬಿ. ಧರ್ಮಣ್ಣವರ ಮಾತನಾಡಿದರು. ಪ್ರಾಚಾರ್ಯ ಶಿವಭೋದ ಶೆಟ್ಟಿ, ಚೇರಮನ್ ಉಮಾ ಎಸ್. ಪಾಟೀಲ, ಉಪಾಧ್ಯಕ್ಷೆ ಅನುಷಾ ಆರ್. ನಾಡಗೌಡ, ಮುಖ್ಯ ಹಣಕಾಸು ಅಧಿಕಾರಿ ಅಶೋಕ ದಾದಮಿ, ಎಸ್.ಆರ್. ಮೇಲ್ನಾಡ, ಎಸ್.ಜಿ. ನ್ಯಾಮಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.