
ಧಾರವಾಡ: ‘ಸಮಾಜಕಲ್ಯಾಣ ಇಲಾಖೆಯವರು ಮಾಹಿತಿ ನೀಡಿಲ್ಲ, ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಅಲಕ್ಷ್ಯ ಮಾಡಲಾಗುತ್ತಿದೆ, ವಿಷಯ ಪ್ರಸ್ತಾಪಿಸಲು ಮಾತನಾಡಲು ಅವಕಾಶ ನೀಡುತ್ತಿಲ್ಲ’ ಎಂದು ವಿಧಾನ ಪರಿಷತ್ತಿನ ಸದಸ್ಯ ಎಫ್.ಎಚ್.ಜಕ್ಕಪ್ಪನವರ ಅವರು ಏರುಧ್ವನಿಯಲ್ಲಿ ಹೇಳಿದಾಗ, ಪ್ರತಿಯಾಗಿ ಜಿಲ್ಲಾ ಉಸ್ತುವಾರಿ ಸಂತೋಷ ಎಸ್.ಲಾಡ್ ಅವರು ‘ಮಾತಾಡಲು ನಿಮಗೆ ಅವಕಾಶ ನೀಡಿದ್ದೇವೆ, ಯಾರನ್ನೂ ಅಲಕ್ಷಿಸಿಲ್ಲ, ಯಾಕೆ ಒದರಾಡುತ್ತಿದ್ದೀರಿ’ ಎಂದಾಗ ಇಬ್ಬರೂ ಪರಸ್ಪರ ವಾಗ್ವಾದ ಮಾಡಿದ ಘಟನೆ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮವಾರ ನಡೆಯಿತು.
‘ಯಾಕೆ ಕಿರುಚುತ್ತಿದ್ದೀರಿ? ಅದರಿಂದ ಏನು ಗಳಿಸುತ್ತೀರಿ?’ ಎಂದು ಸಚಿವ ಲಾಡ್ ಪ್ರಶ್ನಿಸಿದರು.
‘ನಾನು ಕಿರುಚುತ್ತಿಲ್ಲ, ಮಾತನಾಡುವುದೇ ಹಾಗೆ, ಧ್ವನಿ ಇರುವುದೇ ಹಾಗೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇಳುವ ತಾಳ್ಮೆ ಇಲ್ಲ. ವಿಷಯ ಪ್ರಸ್ತಾಪಿಸಲು ಅವಕಾಶ ನೀಡದಿದ್ದರೆ ನಾನು ಹೊರಗೆ ಹೋಗುತ್ತೇನೆ’ ಎಂದು ಎಫ್.ಎಚ್.ಜಕ್ಕಪ್ಪನವರ ಪ್ರತ್ಯುತ್ತರ ನೀಡಿದರು.
‘ಹೊರಗೆ ಹೋಗಿ ಎಂದು ನಾನು ನಿಮಗೆ ಹೇಳಿಲ್ಲ. ಹೋಗಬೇಕಿದ್ದರೆ ನೀವು ಹೋಗಿ’ ಎಂದು ಲಾಡ್ ಹೇಳಿದರು.
‘ಹೊರಗೆ ಹೋಗುವುದಾದರೆ ಹೋಗಿ ಎಂದು ಆಡಳಿತ ಪಕ್ಷದ ಶಾಸಕನಿಗೆ ಹೇಳಿದರೆ ಏನರ್ಥ?...’ ಎಂದು ಜಕ್ಕಪ್ಪನವರ ಹೇಳಿದರು.
‘ಹೊರಗೆಹೋಗುವುದಾಗಿ ನೀವೇ ಹೇಳಿದ್ದು, ಸುಮ್ಮನೆ ಆರೋಪ ಮಾಡಬೇಡಿ. ನಿಮಗೆ ಮಾತನಾಡಲು ಅವಕಾಶ ನೀಡಿದ್ದೇನೆ. ನಿರ್ಬಂಧಿಸಿಲ್ಲ. ಸಿಟ್ಟಾಗಿ ಎದ್ದು ಹೋಗುತ್ತೇನೆ ಎಂದು ಹೇಳಬೇಡಿ’ ಎಂದು ಸಚಿವ ಲಾಡ್ ಹೇಳಿದರು.
ಬಿಜೆಪಿ ಪಕ್ಷದವರಾದ ವಿಧಾನ ಪರಿಷತ್ತಿನ ಸದಸ್ಯ ಪ್ರದೀಪ ಶೆಟ್ಟರ ಮತ್ತು ಶಾಸಕ ಎಂ.ಆರ್.ಪಾಟೀಲ ಅವರು ಜಕ್ಕಪ್ಪನವರ ಅವರ ಕೈಹಿಡಿದು ಕೂರಿಸಿದರು. ಸ್ವಲ್ಪಹೊತ್ತಿನಲ್ಲಿ ನಂತರ, ಇಬ್ಬರೂ ಸಮಾಧಾನವಾದರು.
ಎಸ್ಸಿ, ಎಸ್ಟಿ ಕಾರ್ಯಕ್ರಮಗಳು, ಯೋಜನೆಗಳ ಸಮಗ್ರ ವಿವರವನ್ನು ಎಫ್.ಎಚ್.ಜಕ್ಕಪ್ಪನವರ ಅವರಿಗೆ ನೀಡುವಂತೆ ಸಮಾಜಕಲ್ಯಾಣ ಇಲಾಖೆ ಜಂಟಿನಿರ್ದೇಶಕಗೆ ಸಚಿವ ಲಾಡ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.