ADVERTISEMENT

​ಹುಬ್ಬಳ್ಳಿ: ಪುನೀತ್‌ ನೇತ್ರದಾನದ ಬಳಿಕ ನೇತ್ರ ವಿಜ್ಞಾನ ಸಂಸ್ಥೆಗೆ 500 ಕರೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 16:30 IST
Last Updated 9 ನವೆಂಬರ್ 2021, 16:30 IST
   

ಹುಬ್ಬಳ್ಳಿ: ನಟ ದಿವಂಗತ ಪುನೀತ್‌ ರಾಜ್‌ಕುಮಾರ್ ನೇತ್ರದಾನ ಮಾಡಿದ ಬಳಿಕ ಜನರಲ್ಲಿ ಕಣ್ಣುಗಳ ದಾನದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ಹಿಂದಿನ 10 ದಿನಗಳಲ್ಲಿ 500ಕ್ಕೂ ಹೆಚ್ಚು ಜನ ನೇತ್ರದಾನದ ಬಗ್ಗೆ ವಿಚಾರಣೆ ಮಾಡಲು ಕರೆ ಮಾಡಿದ್ದಾರೆ ಎಂದು ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಜೋಶಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ದೃಷ್ಟಿ ಭಾಗ್ಯವಿಲ್ಲದ ಸುಮಾರು 25 ಲಕ್ಷ ಜನ ಭಾರತದಲ್ಲಿದ್ದಾರೆ. ಸುಮಾರು 15 ಲಕ್ಷ ಜನ ಅಂಧರು ಕಾರ್ನಿಯಾದಿಂದ ಬಳಲುತ್ತಿದ್ದಾರೆ. ಇದರಲ್ಲಿ ಮೂರನೇ ಒಂದರಷ್ಟು 14 ವರ್ಷದ ಒಳಗಿನ ಮಕ್ಕಳೇ ಇದ್ದಾರೆ. ಈಗ ಜನರಲ್ಲಿ ಮೂಡಿರುವ ನೇತ್ರದಾನದ ಜಾಗೃತಿ ಅಭಿಯಾನ ಭವಿಷ್ಯದಲ್ಲಿಯೂ ಮುಂದುವರಿದರೆ ಭಾರತವನ್ನು ಕಾರ್ನಿಯಾ ಮುಕ್ತ ಮಾಡುವುದರಲ್ಲಿ ಅನುಮಾನವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಮರಣಾನಂತರ ನೇತ್ರದಾನ ಮಾಡಲು ಬಹಳಷ್ಟು ಜನ ಶಪಥ ಪತ್ರವನ್ನು ಬರೆದುಕೊಡುತ್ತಿದ್ದಾರೆ. ಬುಧವಾರ ನಗರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಸುಚಿತ್‌ ಅಂಗಡಿ ಹಾಗೂ ರಜನಿ ನೇತ್ರದಾನ ಜಾಗೃತಿ ಹಾಗೂ ಶಪಥ ಮಾಡಲಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.