ಬಂಧನ
(ಸಾಂದರ್ಭಿಕ ಚಿತ್ರ)
ಧಾರವಾಡ: ತಾಲ್ಲೂಕಿನ ಹೊಸತೇಗೂರ ಸಮೀಪದ ಓಲ್ಡ್ ಮುಲ್ಲಾ ಡಾಬಾದಲ್ಲಿ ಕೆಲಸಗಾರ ಅರುಣಕುಮಾರ ಅವರನ್ನು ಸರಪಳಿಯಿಂದ ಕಟ್ಟಿಹಾಕಿ ಕೆಲಸ ಮಾಡಿಸಿದ ಆರೋಪಕ್ಕೆ ಸಂಬಂಧಿಸಿ ನಾಲ್ವರನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಮಹಮ್ಮದ್ ಅಬೂಬುಕರ್, ತಫೂರ್, ಬೆಳಗಾವಿ ಜಿಲ್ಲೆ ಕಿತ್ತೂರಿನ ಮಂಜುನಾಥ ಮಾರುತಿ ಉಪ್ಪಾರ್ ಹಾಗೂ ಬೈಲಹೊಂಗಲದ ಶಾನೂರ ಬಂಧಿತರು. ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಂಕಟಾಪೂರದ ಅರುಣಕುಮಾರ ಪುತ್ರಿಯ ಮದುವೆಗೆ ಡಾಬಾ ಮಾಲೀಕ ಮಹಮ್ಮದ್ ಅಬೂಬುಕರ್ ಮತ್ತು ಅವರ ಮಾವ ತೈಫೂರ್ ಅವರಿಂದ ₹1 ಲಕ್ಷ ಸಾಲ ಪಡೆದಿದ್ದರು. ಅರುಣಕುಮಾರ ಡಾಬಾದಲ್ಲಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ. 20 ದಿನಗಳ ಹಿಂದೆ ಬೇರೆ ಕಡೆಗೆ ಅರುಣಕುಮಾರ ಕೆಲಸಕ್ಕೆ ಹೋಗುತ್ತಾನೆ ಎಂದು ತಿಳಿದು ಅಬೂಬುಕರ್, ತೈಫೂರ್ ಅವರು ಡಾಬಾ ಮ್ಯಾನೇಜರ್ ಮಂಜುನಾಥ ಮತ್ತು ನೌಕರ ಶಾನೂರ ಸಹಾಯದಿಂದ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಅರುಣಕುಮಾರ ಕುಟುಂಬದವರು ಉತ್ತರ ಪ್ರದೇಶದವರು. ಸುಮಾರು 30 ವರ್ಷಗಳ ಹಿಂದೆ ಇಲ್ಲಿಗೆ ಬಂದು ವಾಸವಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.