ADVERTISEMENT

ಗರಗ: ಮಡಿವಾಳೇಶ್ವರ ಶ್ರೀ ರಥೋತ್ಸವಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 6:51 IST
Last Updated 4 ಫೆಬ್ರುವರಿ 2026, 6:51 IST
ಜಾತ್ರೆ ಅಂಗವಾಗಿ ಧಾರವಾಡದ ತಾಲ್ಲೂಕಿನ ಮಡಿವಾಳೇಶ್ವರರ ಕಲ್ಮಠಕ್ಕೆ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿದೆ
ಜಾತ್ರೆ ಅಂಗವಾಗಿ ಧಾರವಾಡದ ತಾಲ್ಲೂಕಿನ ಮಡಿವಾಳೇಶ್ವರರ ಕಲ್ಮಠಕ್ಕೆ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿದೆ   

ಧಾರವಾಡ: ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲೊಂದಾದ ಗರಗ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಫೆ.4ರಂದು ಮಹಾರಥೋತ್ಸವ ‌ಜರುಗಲಿದ್ದು, ಗ್ರಾಮವನ್ನು ಸಿಂಗರಿಸಲಾಗಿದೆ.  

ಮಡಿವಾಳೇಶ್ವರ ಮಠ, ಗೋಪುರ, ದ್ವಾರ ಬಾಗಿಲುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಗ್ರಾಮವನ್ನು ಸ್ವಚ್ಛಗೊಳಿಸಿ ತಳಿರುತೋರಣ ಕಟ್ಟಲಾಗಿದೆ. ಮನೆಗಳಿಗೆ ಬಣ್ಣ ಬಳಿದು ಶೃಂಗರಿಸಲಾಗಿದೆ. 

ರಥವನ್ನು ಅಲಂಕರಿಸಲಾಗಿದೆ. ಗರಗ-ಹಂಗರಕಿ ಸೇರಿದಂತೆ ಕೋಟೂರ, ತಡಕೋಡ, ಕುರಬಗಟ್ಟಿ, ಕೊಟಬಾಗಿ, ಯಾದವಾಡ, ಬೇಲೂರು ಸುತ್ತಲಿನ ಗ್ರಾಮಗಳ ಭಕ್ತರು ಮಂಗಳವಾರ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಿದರು. ಗರಗ ಸುತ್ತಲಿನ ಗ್ರಾಮಗಳ ಜನರು ಸಹಿತ ಸುತ್ತಲಿನ ಜಿಲ್ಲೆಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. 

ADVERTISEMENT

‘ಜಾತ್ರೆ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇದೆ. ಮಹಾಪ್ರಸಾದಕ್ಕೆ ಹುಗ್ಗಿ, ಸಜ್ಜಕ ಅನ್ನ, ಸಂಬಾರು, ಬದನೆಕಾಯಿ ಪಲ್ಲೆ ಸಿದ್ಧಪಡಿಸಲಾಗುವುದು. 60 ಕ್ವಿಂಟಲ್ ಅಕ್ಕಿ, 10 ಕ್ವಿಂಟಲ್ ತೊಗರಿ ಬೇಳೆ, 30 ಕ್ಯಾನ್ (ತಲಾ 15 ಲೀಟರ್) ಅಡುಗೆ ಎಣ್ಣೆ, 30 ಕ್ವಿಂಟಲ್ ರವಾ, 50 ಕ್ವಿಂಟಲ್ ಬೆಲ್ಲ, ಎರಡು ಟ್ರ್ಯಾಕ್ಟರ್ ಟೈಲರ್ ಬದನೆಕಾಯಿ, ಒಂದು ಟೈಲರ್ ಟೊಮೊಟೊ, ಒಂದು ಟೈಲರ್ ಈರುಳ್ಳಿ, 10 ಚೀಲ ಬೆಳ್ಳುಳ್ಳಿ ಸಂಗ್ರಹಿಸಲಾಗಿದೆ. 250 ಮಂದಿ ಅಡುಗೆ ತಯಾರಿಸುವರು. ವಿವಿಧ ಗ್ರಾಮಗಳ 500ಕ್ಕೂ ಹೆಚ್ಚು ಸ್ವಯಂಸೇವಕರು ಅನ್ನ ದಾಸೋಹ ಕಾಯಕ ನಿರ್ವಹಿಸುವರು’ ಎಂದು ಕಲ್ಮಠ ಟ್ರಸ್ಟ್ ಸದಸ್ಯ ಶಿವಾನಂದ ಉಳ್ಳವಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಥೋತ್ಸವ ನಿಟ್ಟಿನಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. 150 ಗೃಹ ರಕ್ಷಕ ದಳ ಸಿಬ್ಬಂದಿ, 50 ಪೊಲೀಸ್‌ ಸಿಬ್ಬಂದಿ, 2 ಡಿಆರ್, 2 ಕೆಎಸ್‍ಆರ್‌ಪಿ ತಂಡ, ನಾಲ್ವರು ಸಿಪಿಐ ಹಾಗೂ ಆರು ಪಿಎಸ್‍ಐ. ಮಠದ ಸುತ್ತಲಿನ ಜಮೀನುಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಗರಗ ಪಿಎಸ್‍ಐ ಸಿದ್ರಾಮ ಉನ್ನದ ತಿಳಿಸಿದರು.

ಊಟಕ್ಕೆ 35 ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12ರಿಂದ ರಾತ್ರಿವರೆಗೂ ಪ್ರಸಾದ ವ್ಯವಸ್ಥೆ ಇರುತ್ತದೆ.
ಅಶೋಕ ದೇಸಾಯಿ, ಕಾರ್ಯಾಧ್ಯಕ್ಷ ,ಮಡಿವಾಳೇಶ್ವರ ಕಲ್ಮಠ ಟ್ರಸ್ಟ್
ಮಡಿವಾಳೇಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವದಲ್ಲಿ ಎಲ್ಲ ಸಮುದಾಯದವರು ಪಾಲ್ಗೊಳ್ಳುತ್ತಾರೆ. ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳುವರು
ಆತ್ಮರಾಮ ಸ್ವಾಮೀಜಿ, ಗರಗ ಮಡಿವಾಳೇಶ್ವರ ಕಲ್ಮಠ
ಪ್ರಸಾದ ವ್ಯವಸ್ಥೆ ಸಿದ್ಧತಾ ಕಾರ್ಯಗಳನ್ನು ಆತ್ಮರಾಮ ಸ್ವಾಮೀಜಿ ವಿಕ್ಷೀಸಿದರು
ಮಡಿವಾಳೇಶ್ವರ ದೇವರ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.