ADVERTISEMENT

ವಾಸ್ಕೋ– ಹೊಸಪೇಟೆ ಜೋಡಿ ರೈಲು ಮಾರ್ಗಕ್ಕೆ ವಿರೋಧ

ಗೋವಾ ಮಾಜಿ ಸಿಎಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 19:30 IST
Last Updated 10 ನವೆಂಬರ್ 2020, 19:30 IST

ಹುಬ್ಬಳ್ಳಿ: ‘ಅದಾನಿ, ಜೆಎಸ್‌ಡಬ್ಲ್ಯು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ನೈರುತ್ಯ ರೈಲ್ವೆ ವಾಸ್ಕೋದಿಂದ ಹೊಸಪೇಟೆವರೆಗೆ ಜೋಡಿ ಹಳಿ ಕಾಮಗಾರಿ ನಡೆಸಲು ಮುಂದಾಗಿದೆ’ ಎಂದು ಗೋವಾದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ದಿಗಂಬರ ಕಾಮತ್‌ ಆರೋಪಿಸಿದರು.

ನಗರದ ರೈಲು ಸೌಧದ ಎದುರು ಮಂಗಳವಾರ ಪಕ್ಷದ ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನೆ ನಡೆಸಿದ ಅವರು, ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

‘ಗೋವಾ ಚಿಕ್ಕ ರಾಜ್ಯ. ಈಗಾಗಲೇ ಅಭಿವೃದ್ಧಿಪರ ಯೋಜನೆಗಳಿಂದಾಗಿ ಸಾಕಷ್ಟು ಭೂಮಿ ಕಳೆದುಕೊಂಡಿದೆ. ಈ ನಡುವೆಯೇ ನೈರುತ್ಯ ರೈಲ್ವೆ, ಜೋಡಿ ಹಳಿ ಮಾರ್ಗ ನಿರ್ಮಿಸಲು ಭೂಸ್ವಾಧೀನಕ್ಕೆ ಮುಂದಾಗಿದೆ. ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಕ್ಕೂ ಹಾನಿಯಾಗಲಿದೆ’ ಎಂದು ಅವರು ಸುದ್ದಿಗಾರರೆದುರು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಈಗಿರುವ ರೈಲು ಮಾರ್ಗದಲ್ಲಿ ಪ್ರತಿನಿತ್ಯ ನಾಲ್ಕು ಎಕ್ಸ್‌ಪ್ರೆಸ್‌ ರೈಲು ಹಾಗೂ ಮೂರು ಲೋಕಲ್‌ ರೈಲು ಸಂಚರಿಸುತ್ತವೆ. ಜನರ ಓಡಾಟಕ್ಕೆ ಇಷ್ಟು ಸಾಕು’ ಎಂದರು.

ಗೋವಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಗಿರೀಶ ಚೌಡನಕರ್‌ ಮಾತನಾಡಿ, ‘ಹೆಚ್ಚುವರಿ ಹಳಿ ಕಾಮಗಾರಿಯಿಂದ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಅಲ್ಲದೆ, ಈಗಾಗಲೇ ಕೈಗೆತ್ತಿಕೊಂಡಿರುವ ವಿದ್ಯುತ್‌, ರೈಲು ಮಾರ್ಗ ಯೋಜನೆಯಿಂದ 63 ಸಾವಿರ ಮರಗಳು ನಾಶವಾಗಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.