ಧಾರವಾಡ: ‘ಕಣ್ಣು, ಕಿವಿ ಹಾಗೂ ಹೃದಯವಿಲ್ಲದ ರಾಜ್ಯ ಸರ್ಕಾರವು ಕಳೆದ ವರ್ಷದ ನೆರೆ ಪರಿಹಾರವನ್ನೇ ಬಿಡುಗಡೆ ಮಾಡಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೆರೆ ಸಂತ್ರಸ್ತರ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ. ಅವರ ಕಷ್ಟಗಳು ಏನು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಭೇಟಿ ನೀಡಿ ವಿಚಾರಿಸಬೇಕಿತ್ತು. ಆದರೆ ಅಲ್ಲೆಲ್ಲೋ ಕುಳಿತು ಮಾತನಾಡುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಈ ವರ್ಷ ದೇವರೇ ಗತಿ’ ಎಂದು ಕೈಚೆಲ್ಲಿದ್ದಾರೆ. ಹೀಗಾದರೆ ದೇಶದ ಜನರ ಪಾಡೇನು?’ ಎಂದರು.
‘ಪದವೀಧರ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಉಪಚುನಾವಣೆ ಅಭ್ಯರ್ಥಿಗಳ ಹೆಸರು ಇನ್ನೂ ಅಂತಿಮವಾಗಬೇಕಿದೆ. ಬಿಜೆಪಿ ಕಡೆ ಸರ್ಕಾರವೇ ಇದೆ. ಹೀಗಾಗಿ ಅವರು ಜೋರಾಗಿಯೇ ಚುನಾವಣೆ ನಡೆಸುತ್ತಾರೆ. ವಿರೋಧಪಕ್ಷದಲ್ಲಿರುವ ನಾವು ನಮ್ಮ ಕೆಲಸ ಮಾಡುತ್ತೇವೆ’ ಎಂದರು.
ಡಿ.ಕೆ.ರವಿ ಪತ್ನಿಗೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ‘ಟಿಕೆಟ್ ವಿಷಯ ಕುರಿತ ಜವಾಬ್ದಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ. ಅವರು ನೋಡಿ ತೀರ್ಮಾನಿಸಿ ಹೇಳುತ್ತಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.