ADVERTISEMENT

ಹುಬ್ಬಳ್ಳಿ: ವಡಾಪಾವ್‌ ಮಾರಾಟ ಮಾಡುವ ಮಹಾದೇವ ಪುತ್ರಿಗೆ ಪದಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಮೇ 2022, 15:12 IST
Last Updated 1 ಮೇ 2022, 15:12 IST
ಪೋಷಕರ ಜೊತೆ ಪದಕದ ಖುಷಿ ಹಂಚಿಕೊಂಡ ಮಂದಾಕಿನಿ ಕದಂ
ಪೋಷಕರ ಜೊತೆ ಪದಕದ ಖುಷಿ ಹಂಚಿಕೊಂಡ ಮಂದಾಕಿನಿ ಕದಂ   

ಹುಬ್ಬಳ್ಳಿ: ‘ಮಗಳು ದೊಡ್ಡ ಸಾಧನೆ ಮಾಡಬೇಕು ಎನ್ನುವ ಆಸೆಯೊಂದಿಗೆ ಪೋಷಕರು ಶ್ರಮಪಟ್ಟು ನನ್ನನ್ನು ಓದಿಸಿದ್ದಾರೆ. ಅವರ ಆಸೆ ಈಡೇರಿಸಿದ ಹೆಮ್ಮೆಯಿದೆ...’

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಎಂಟೆಕ್‌ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಹುಬ್ಬಳ್ಳಿಯ ಮಂದಾಕಿನಿ ಕದಂ ಹೇಳಿದ ಮಾತುಗಳು ಇವು. ಇವರ ತಂದೆ ಮಹಾದೇವ್‌ ಕದಂ ಮರಾಠ ಗಲ್ಲಿಯಲ್ಲಿ ವಡಪಾವ್‌ ವ್ಯಾಪಾರ ಮಾಡುತ್ತಾರೆ. ತಾಯಿ ರಾಧಾ ಪತಿಗೆ ನೆರವಾಗುತ್ತಿದ್ದಾರೆ. ಈ ದಂಪತಿಯ ಐದು ಜನ ಹೆಣ್ಣುಮಕ್ಕಳ ಪೈಕಿ ಮಂದಾಕಿನಿ ಮೂರನೇಯವರು. ಉಳಿದ ನಾಲ್ಕೂ ಜನ ಪದವೀಧರರು.

‘ಪದವಿ ಪೂರ್ಣಗೊಳಿಸಿ ಆರು ವರ್ಷಗಳ ಬಳಿಕ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದೆ. ಹೀಗಾಗಿ ಪದಕ ಬರುವ ನಿರೀಕ್ಷೆ ಇಟ್ಟುಕೊಳ್ಳದೆ ಶ್ರದ್ಧೆಯಿಂದ ಓದಿದೆ. ಉತ್ತಮ ಅಂಕಗಳ ಜೊತೆಗೆ ಪದಕವೂ ಬಂದಿದ್ದಕ್ಕೆ ಖುಷಿ ದುಪ್ಪಟ್ಟಾಗಿದೆ’ ಎಂದು ಸಂತೋಷ ಹಂಚಿಕೊಂಡರು.

ADVERTISEMENT

ಎಂಟೆಕ್‌ನಲ್ಲಿ ಚಿನ್ನದ ಪಡೆದ ಪಡೆದ ಶಿಗ್ಗಾವಿಯ ಅಮಿತ್‌ ಕನಕಗಿರಿ ‘ಪದವಿ ಪೂರ್ಣಗೊಳಿಸಿ ಆರು ವರ್ಷಗಳ ಬಳಿಕ ಸ್ನಾತಕೋತ್ತರ ಪದವಿ ಓದಿ ಚಿನ್ನ ಪಡೆದಿದ್ದೇನೆ. ಪೋಷಕರ ಶ್ರಮಕ್ಕೆ ಬೆಲೆ ಬಂದಿದೆ’ ಎಂದರು.

ಎಲೆಕ್ಟ್ರಾನಿಕ್ಸ್ ಅಂಡ್‌ ‌ಕಮ್ಯುನಿಕೇಷನ್‌ ವಿಭಾಗದಲ್ಲಿ ಚಿನ್ನ ಪಡೆದ ರೈತನ ಪುತ್ರಿ ಪದ್ಮಾವತಿ ರಂಗನ್ನವರ ‘ನನ್ನ ಓದಿನ ಆಸೆಗೆ ಪೋಷಕರು ನೆರವಾದರು. ಚಿನ್ನ ಬಂದಿರುವುದು ಹೆಮ್ಮೆಯ ವಿಷಯ’ ಎಂದು ಖುಷಿ ಹಂಚಿಕೊಂಡರು.

ಆರ್ಕಿಟೆಕ್ಟ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಅವನಿಕಾ ಎಮ್ಮಿಯವರ ‘ಅಮ್ಮ ಓದಿದ ಕಾಲೇಜಿನಲ್ಲಿ ನನಗೆ ಪದಕ ಬಂದಿದ್ದು ಖುಷಿಯ ವಿಚಾರ. ಸದ್ಯಕ್ಕೆ ಹಾಲೆಂಡ್‌ನಲ್ಲಿ ಎಂ.ಎಸ್‌. ಓದುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.