ಹುಬ್ಬಳ್ಳಿ: ಮದುವೆಗೆ ಬಂದವರಿಗೆ ತಾಂಬೂಲ ನೀಡುವುದು ಸಾಮಾನ್ಯ. ಆದರೆ, ನಗರದ ಕನ್ನಡ ಪ್ರೇಮಿಯೊಬ್ಬರು ತಮ್ಮ ಮಗನ ಮದುವೆಗೆ ಬಂದವರಿಗೆ ಕನ್ನಡದ ಹೆಸರಾಂತ ಕವಿಗಳ, ಕಲಾವಿದರ, ಸಂಗೀತ ದಿಗ್ಗಜರ ಮಾಹಿತಿ ಒಳಗೊಂಡ ‘ಕನ್ನಡ ನುಡಿಯ ತಾಂಬೂಲ’ ಕಿರು ಪುಸ್ತಕ ನೀಡಲು ಮುಂದಾಗಿದ್ದಾರೆ. ಇದೇ ಪುಸ್ತಕದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿದ್ದಾರೆ.
ನಗರದ ಸರಾಫ್ಗಟ್ಟಿಯ ಎಂ.ಎಂ. ಹೂಲಿ ಅಂಡ್ ಸನ್ಸ್ ಜ್ಯುವೆಲರ್ಸ್ ಅಂಗಡಿಯ ಮಾಲೀಕ ವೀರಭದ್ರಪ್ಪ ಮಡಿವಾಳಪ್ಪ ಹೂಲಿ ತಮ್ಮ ಮಗ ವಿನಾಯಕನ ಮದುವೆಗಾಗಿ ಈ ಆಮಂತ್ರಣ ಸಿದ್ಧಪಡಿಸಿದ್ದಾರೆ.
‘ಹೂಬಳ್ಳಿಯ ಪುಸ್ತಕಗಳು’ ಪ್ರಕಟಿಸಿರುವ ಅವರು ಮದುವೆ ಆಮಂತ್ರಣದ ಕಿರು ಹೊತ್ತಿಗೆಯಲ್ಲಿ ಸಿದ್ಧಾರೂಢ ಸ್ವಾಮೀಜಿ, ಡಾ.ಗಂಗಾಧರ ಸ್ವಾಮೀಜಿ, ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಸ್ಮರಿಸಿದ್ದಾರೆ.
ಬಳಿಕ ರೆ. ಉತ್ತಂಗಿ ಚನ್ನಪ್ಪ, ವೀರರಾಣಿ ಕಿತ್ತೂರು ಚನ್ನಮ್ಮ, ಜಿ.ಪಿ.ರಾಜರತ್ನಂ, ಚಿತ್ರ ಕಲಾವಿದ ಡಿ.ವಿ. ಹಾಲಭಾವಿ, ಫ.ಗು. ಹಳಕಟ್ಟಿ, ಕುಂಚ ಬ್ರಹ್ಮ ಡಾ.ಎಂ.ವಿ.ಮಿಣಜಗಿ, ಸರ್ವಜ್ಞ, ಶಿಂಪಿ ಲಿಂಗಣ್ಣ, ಮಲ್ಲಿಕಾರ್ಜುನ ಮನ್ಸೂರ, ಡಾ. ಡಿ.ಎಸ್. ಕರ್ಕಿ, ಗಂಗೂಬಾಯಿ ಹಾನಗಲ್, ಚನ್ನವೀರ ಕಣವಿ, ಸರ್ ಸಿದ್ದಪ್ಪ ಕಂಬಳಿ, ಹರ್ಡೇಕರ್ ಮಂಜಪ್ಪ, ಭೀಮಸೇನ್ ಜೋಶಿ, ಗಳಗನಾಥ, ಪಾಟೀಲ ಪುಟ್ಟಪ್ಪ ಹೀಗೆ ಅನೇಕರ ಮಾಹಿತಿ ಹೊತ್ತಿಗೆಯಲ್ಲಿದೆ.
ಸಾಹಿತಿಗಳು, ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಂಗೀತ ದಿಗ್ಗಜರು, ರಾಷ್ಟ್ರೀಯ ನಾಯಕರು, ಕಲಾವಿದರ ಸ್ಫೂರ್ತಿಯ ಮಾತುಗಳು ಹೊತ್ತಿಗೆಯಲ್ಲಿ ದಾಖಲಾಗಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಾಹಿತಿಯನ್ನೂ ಫೋಟೊ ಸಮೇತ ಪ್ರಕಟಿಸಿದ್ದಾರೆ.
ವೀರಭದ್ರಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ವಿನಾಯಕ ಅವರ ವಿವಾಹ ಫೆ. 14ರಂದು ಇಚಲಕರಂಜಿಯ ಸುಭಾಷ ಬಸವರಾಜ ಗುಣಕಿ ಹಾಗೂ ಭಾರತಿ ದಂಪತಿಯ ಪುತ್ರಿ ದಾನೇಶ್ವರಿ ಜೊತೆ ಚವ್ಹಾಣ ಗ್ರೀನ್ ಗಾರ್ಡನ್ನಲ್ಲಿ ಆಯೋಜನೆಯಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೀರಭದ್ರಪ್ಪ ‘ನಾನು ಮೊದಲಿನಿಂದಲೂ ಕನ್ನಡ ಪ್ರೇಮಿ. ಮದುವೆಯ ನೆಪದಲ್ಲಿ ಕನ್ನಡದ ಸಾಧಕರ ಪರಿಚಯದ ಹೊತ್ತಿಗೆ ಪ್ರಕಟಿಸಿದ್ದೇವೆ. ಆಮಂತ್ರಣ ಪತ್ರಿಕೆ ಜೊತೆ ಪ್ರಮುಖ ಸಾಧಕರ ಮಾಹಿತಿ ನೀಡಿದ್ದೇವೆ. ಮದುವೆ ದಿನ ಕಲ್ಯಾಣ ಮಂಟಪದಲ್ಲಿ ಪ್ರಮುಖ ಸಾಹಿತಿಗಳ, ಕಲಾವಿದರ ಭಾವಚಿತ್ರಗಳನ್ನು ಪ್ರದರ್ಶಿಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.