
ಹುಬ್ಬಳ್ಳಿ: ನಗರದ ಮೂರು ಸಾವಿರಮಠದ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಒಣ ಮೆಣಸಿನಕಾಯಿ ಮೇಳದಲ್ಲಿ ₹87.86 ಲಕ್ಷ ವಹಿವಾಟು ನಡೆದಿದ್ದು, 175 ಟನ್ ಒಣಮೆಣಸಿನಕಾಯಿ ಮಾರಾಟವಾಗಿದೆ.
ಕರ್ನಾಟಕ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಹಾಗೂ ಅಮರಗೋಳದ ಉಳುವ ಯೋಗಿ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಮೂರು ದಿನ ಮೇಳ ಆಯೋಜಿಸಲಾಗಿತ್ತು.
‘ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ರೈತರು 68 ಮಳಿಗೆಗಳಲ್ಲಿ ಮೆಣಸಿನಕಾಯಿ ಮಾರಿದರು. ಮೂರನೇ ದಿನವಾದ ಭಾನುವಾರ ₹40.45 ಲಕ್ಷ ಮೌಲ್ಯದ ಮೆಣಸಿನಕಾಯಿ ಮಾರಾಟವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಹನುಮಂತ ಹೊಳೆಗಾರ ತಿಳಿಸಿದರು.
‘ಪ್ರಸ್ತುತ ವರ್ಷ ಅತಿವೃಷ್ಟಿಯಿಂದ ಮೆಣಸಿನಕಾಯಿ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲೂ ಮೆಣಸಿನಕಾಯಿ ದರ ಹೆಚ್ಚಳವಾಗಿದೆ. ಹೀಗಾಗಿ ಮೇಳಕ್ಕೆ ಕಡಿಮೆ ಪ್ರಮಾಣದಲ್ಲಿ ಮೆಣಸಿನಕಾಯಿ ಬಂದಿದ್ದು, ದರವೂ ಸ್ವಲ್ಪ ಹೆಚ್ಚಾಗಿತ್ತು. ಮೇಳಕ್ಕೆ ತಂದಿರುವ ಎಲ್ಲ ಮೆನಸಿನಕಾಯಿಯೂ ಬಹುತೇಕ ಮಾರಾಟವಾಗಿದೆ’ ಎಂದರು.
‘ಪ್ರತಿ ವರ್ಷದಂತೆ ಈ ಸಲವೂ ಮೇಳದಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿತ್ತು. ಆದರೆ, ಇಳುವರಿ ಕಡಿಮೆಯಿದ್ದ ಕಾರಣ ಬೆಲೆ ಜಾಸ್ತಿಯೆಂದು ಖರೀದಿ ಕಡಿಮೆ ಮಾಡಿದ್ದಾರೆ. ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿ ಕನಿಷ್ಠ ₹300 ರಿಂದ ಗರಿಷ್ಠ ₹700ಕ್ಕೆ ಮಾರಾಟ ಆಗಿತ್ತು. ಪ್ರಸ್ತುತ ವರ್ಷ ₹400 ರಿಂದ ₹900ರವರೆಗೂ ಮಾರಾಟವಾಗಿದೆ’ ಎಂದು ಕುಂದಗೋಳ ರೈತ ಷಣ್ಮುಗಪ್ಪ ಸಂಶಿ ಹೇಳಿದರು.
ವಾರಾಂತ್ಯ ದಿನವಾದ ಶನಿವಾರ, ಭಾನುವಾರ ಸಂಜೆ ವೇಳೆ ಮೆಣಸಿನಕಾಯಿ ಮೇಳಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ರೈತರಿಗೆ ಪ್ರಮಾಣಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.