ಹುಬ್ಬಳ್ಳಿ: ‘55 ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೆ. ಆದರೆ, ಕಟಾವು ವೇಳೆ ಸುರಿದ ಮಳೆಯಿಂದ ಕಾಳು ನೀರು ಹಿಡಿದು ಶೇ 80ರಷ್ಟು ಬೆಳೆ ಹಾಳಾಯಿತು. ಬಿತ್ತನೆ, ಗೊಬ್ಬರ, ಕಟಾವು, ಕೂಲಿ ಸೇರಿ ₹5 ಲಕ್ಷ ಖರ್ಚಾಗಿದೆ. 300ಕ್ಕೂ ಹೆಚ್ಚು ಕ್ವಿಂಟಲ್ ಬರಬೇಕಿದ್ದ ಹೆಸರು 50 ಕಿಂಟಲ್ ಮಾತ್ರ ಬಂದಿದೆ. ಕಾಳು ಗುಣಮಟ್ಟವಿಲ್ಲ ಎಂದು ಮಾರುಕಟ್ಟೆಯಲ್ಲಿ ಬೆಲೆಯೂ ಸಿಗುತ್ತಿಲ್ಲ..!‘
–ಇದು ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರೈತ ಮಹಾಬಲೇಶ್ವರ ವೈ.ಅಣ್ಣಿಗೇರಿ ಅವರ ಅಳಲು. ಜಿಲ್ಲೆಯಲ್ಲಿ ಹೆಸರು, ಉದ್ದು ಬೆಳೆದ ಬಹುತೇಕ ರೈತರ ನೋವು ಕೂಡ ಹೌದು. ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಬೆಳೆಗಳ ಕಟಾವು ವೇಳೆ, ಆಗಸ್ಟ್ ಎರಡನೇ ವಾರದಲ್ಲಿ ಸುರಿದ ಮಳೆಗೆ ಹಾಳಾಗಿವೆ.
ಸತತ ಮಳೆಯಿಂದ ಜಿಲ್ಲೆಯಲ್ಲಿ 78,384 ಹೆಕ್ಟೇರ್ ಹೆಸರು. 10,586 ಹೆಕ್ಟೇರ್ನಲ್ಲಿ ಉದ್ದು ಸೇರಿ ಜಿಲ್ಲೆಯಲ್ಲಿ ಒಟ್ಟು 88,970 ಹೆಕ್ಟೇರ್ ಹೆಸರು ಮತ್ತು ಉದ್ದು ಬೆಳೆ ಹಾನಿಯಾಗಿದೆ. ಅದರಲ್ಲೂ ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ ಮತ್ತು ಕುಂದಗೊಳ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹೆಸರು, ಉದ್ದು ಬೆಳೆ ಹಾನಿಯಾಗಿದೆ. ಈ ಬಗ್ಗೆ ಧಾರವಾಡ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ಈಗಾಗಲೇ ಮಳೆಯಿಂದ ಹಾನಿಯಾಗಿರುವ ಈ ಬೆಳೆಗಳ ಸಮೀಕ್ಷೆ ನಡೆಸಿ, ಅದರ ಕರಡುಪಟ್ಟಿ ಸಿದ್ಧಪಡಿಸಿದ್ದಾರೆ.
ಬೆಳೆ ಖರ್ಚು ಸಿಗುತ್ತಿಲ್ಲ: ‘ಕಟಾವಿಗೆ ಬಂದಿದ್ದ ಹೆಸರು, ಮಳೆಗೆ ಹಾಳಾಯಿತು. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಕನಿಷ್ಠ ₹8 ಸಾವಿರಕ್ಕೆ ಮಾರಾಟ ಆಗಬೇಕಿದ್ದ ಹೆಸರಿನ ದರ ಕ್ವಿಂಟಲ್ಗೆ ₹1,500ರಿಂದ ₹3,500ಕ್ಕೆ ಕುಸಿದಿದೆ. ಬೆಳೆಗೆ ಖರ್ಚು ಮಾಡಿದ ಹಣ ಸಿಗುತ್ತಿಲ್ಲ’ ಎಂದು ಶಿರಗುಪ್ಪಿಯ ರೈತ ಮಹಾಬಲೇಶ್ವರ ವೈ.ಅಣ್ಣಿಗೇರಿ ತಿಳಿಸಿದರು.
‘20 ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೆ. 100 ಕ್ವಿಂಟಲ್ನಷ್ಟು ಫಸಲು ಬರಬೇಕಿತ್ತು. ಆದರೆ, ಮಳೆ ಕಾರಣ 20 ಕ್ವಿಂಟಲ್ ಮಾತ್ರ ಬಂದಿದೆ. ಬಿತ್ತನೆಯಿಂದ ಒಕ್ಕಲು ಮಾಡುವವರೆಗೆ ₹2.50 ಲಕ್ಷ ಖರ್ಚಾಗಿದೆ. ಈಗ ₹50 ಸಾವಿರವೂ ಸಿಗುತ್ತಿಲ್ಲ’ ಎಂದು ಕೊಳಿವಾಡ ಹೊಬಳಿಯ ರೈತ ಸುಬಾಸ್ ಬೂದಿಹಾಳ ತಿಳಿಸಿದರು.
ಜೋಳ ಮೆಕ್ಕೆಜೋಳ ತೊಗರಿ ಹುರುಳಿ ಅಲಸಂದಿ ಶೇಂಗಾ ಬೆಳೆಗಳಿಗೆ ಮಳೆಯಿಂದ ಹಾನಿಯಾಗಿಲ್ಲ. ಆದರೆ ಆಗಸ್ಟ್ನಲ್ಲಿ ಕಟಾವಿಗೆ ಬಂದ ಹೆಸರು ಉದ್ದು ಬೆಳೆಗೆ ಮಾತ್ರ ಹಾನಿಯಾಗಿದೆಮಂಜುನಾಥ ಅಂತರವಳ್ಳಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಧಾರವಾಡ
ಜಿಲ್ಲೆಯಲ್ಲಿ ವಾಡಿಕೆಯಂತೆ 400 ಮಿಮೀ. ಮಳೆ ಬದಲು 449 ಮಿಮೀ. ಮಳೆಯಾಗಿದೆ. ಶೇ 12ರಷ್ಟು ಹೆಚ್ಚು ಮಳೆಯಾಗಿದೆ. ಹೆಸರು ಉದ್ದು ಸೇರಿ ಕೆಲ ಬೆಳೆಗಳಿಗೆ ಹಾನಿಯಾಗಿದೆ.ರವಿ ಪಾಟೀಲ ಕೃಷಿ ಹವಾಮಾನ ತಜ್ಞ ಕೃಷಿ ವಿಶ್ವವಿದ್ಯಾಲಯ. ಧಾರವಾಡ
35 ಎಕರೆಯಲ್ಲಿ ಬಿತ್ತನೆ ಮಾಡಿದ್ದೆ ಹೆಸರು 200 ಕ್ವಿಂಟಲ್ನಷ್ಟು ಇಳುವರಿ ಬರಬೇಕಿತ್ತು. 45 ಕ್ವಿಂಟಲ್ ಮಾತ್ರ ಬಂದಿದೆ. ₹1ಲಕ್ಷವೂ ವಾಪಸ್ ಬರಲ್ಲ. ತುಂಬಾ ಬೇಸರವಾಗಿದೆಮೈಲಾರಪ್ಪ ಬಿ.ಗಂಗೋಜಿ ರೈತ ಕೋಳಿವಾಡ ಗ್ರಾಮ ಹುಬ್ಬಳ್ಳಿ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.