
ಹುಬ್ಬಳ್ಳಿಯ ಹಳೇ ಸಿಎಆರ್ ಮೈದಾನದಲ್ಲಿ ಶುಕ್ರವಾರ ಹು–ಧಾ ಮಹಾನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್. ಭಾರತಿ ಚಾಲನೆ ನೀಡಿದರು. ಕಮಿಷನರ್ ಎನ್. ಶಶಿಕುಮಾರ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ‘ಪ್ರತಿದಿನ ಒತ್ತಡದಲ್ಲಿಯೇ ಕೆಲಸ ಮಾಡುತ್ತ ದಿನ ಕಳೆಯುವ ಪೊಲೀಸರು, ವಾರ್ಷಿಕ ಕ್ರೀಡಾಕೂಟದಿಂದ ತುಸು ಮಾನಸಿಕ ನೆಮ್ಮದಿ ಪಡೆಯುವಂತಾಗಬೇಕು’ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್.ಭಾರತಿ ಹೇಳಿದರು.
ನಗರದ ಹಳೇ ಸಿಎಆರ್ ಮೈದಾನದಲ್ಲಿ ಶುಕ್ರವಾರ ಹು-ಧಾ ಮಹಾನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕ್ರೀಡೆಯಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ದೈಹಿಕವಾಗಿ ಸದೃಢವಾಗುವುದಲ್ಲದೆ, ಮಾನಸಿಕವಾಗಿಯೂ ಗಟ್ಟಿಯಾಗಲು ಸಾಧ್ಯ. ಪರಸ್ಪರ ಬೆರೆತು ಸಾಮಾಜಿಕ ಹಾಗೂ ವೃತ್ತಿಪರತೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಬಹುದು’ ಎಂದು ಹೇಳಿದರು.
ಧಾರವಾಡ ಜಿಲ್ಲಾ ಭೂಸ್ವಾಧೀನ ವಿಶೇಷ ಅಧಿಕಾರಿ ದೇವರಾಜ ಮಾತನಾಡಿ, ‘ದೈಹಿಕ ಸಾಮರ್ಥ್ಯ ಯಾಕೆ ಬೇಕು ಅನ್ನುವುದು ಮೊದಲು ನಾವೆಲ್ಲ ಅರಿಯಬೇಕು. ಅದರ ನಿಜಾರ್ಥ ತಿಳಿದಾಗ, ದೈನಂದಿನ ಬದುಕಲ್ಲಿ ಅರ್ಧಗಂಟೆಯಾದರೂ ಅದಕ್ಕೆ ಮೀಸಲಿಡುತ್ತೇವೆ. ದೇಹ ಸದೃಢವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತವೆ. ಕೂಡಿ ಬೆರೆಯುವುದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಸಾಂಘಿಕ ಒಗ್ಗಟ್ಟು ಪ್ರತಿಫಲಿಸುತ್ತದೆ’ ಎಂದರು.
‘ಕ್ರೀಡಾಸ್ಫೂರ್ತಿಯಿಂದ ಸಿಬ್ಬಂದಿ ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ಪ್ರತಿಭೆ ಮೆರೆಯಬೇಕು’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಎರಡು ದಿನ ನಡೆಯುವ ಕ್ರೀಡಾಕೂಟದಲ್ಲಿ ಸಿಎಆರ್ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಧಾರವಾಡ ವಿಭಾಗ, ಮಹಿಳಾ ವಿಭಾಗ ಮತ್ತು ಸಂಚಾರ ವಿಭಾಗದ ತಂಡಗಳು ಪಾಲ್ಗೊಂಡಿವೆ. ಡಿಸಿಪಿ ಮಹಾನಿಂಗ ನಂದಗಾವಿ, ರವೀಶ ಸಿ.ಆರ್. ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.