ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ದೌರ್ಜನ್ಯವೆಸಗಿ ಕೊಲೆ ಮಾಡಿದ್ದ ಪ್ರಕರಣದ ಆರೋಪಿ ರಿತೇಶಕುಮಾರ್ ಶವದ ಅಂತ್ಯಕ್ರಿಯೆ ಶನಿವಾರ ನಗರದ ಬಿಡ್ನಾಳದ ಸ್ಮಶಾನದಲ್ಲಿ ನಡೆಯಿತು.
‘ಕೆಎಂಸಿ–ಆರ್ಐ ಶವಾಗಾರದ ಫ್ರೀಜರ್ನಲ್ಲಿ 21 ದಿನದಿಂದ ಇಡಲಾಗಿದ್ದ ಶವ ಕೊಳೆಯುವ ಸ್ಥಿತಿಗೆ ತಲುಪಿತ್ತು. ಆದಷ್ಟು ಬೇಗ ಅಂತ್ಯಕ್ರಿಯೆ ಮಾಡಲು ವೈದ್ಯರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪೊಲೀಸರಿಗೆ ವರದಿ ಸಲ್ಲಿಸಿದ್ದರು’ ಎಂದು ಕೆಎಂಸಿ–ಆರ್ಐ ನಿರ್ದೇಶಕ ಎಸ್.ಎಫ್. ಕಮ್ಮಾರ್ ತಿಳಿಸಿದ್ದಾರೆ.
ಏಪ್ರಿಲ್ 13ರಂದು ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ, ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಆರೋಪದಡಿ ರಿತೇಶಕುಮಾರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ವಶದಲ್ಲಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಆತ್ಮರಕ್ಷಣೆಗೆ ಪೊಲೀಸರು ಹಾರಿಸಿದ ಗುಂಡು ತಗುಲಿ ಮೃತಪಟ್ಟಿದ್ದ. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ‘ಶವ ಪ್ರಮುಖ ಸಾಕ್ಷ್ಯ. ಇದರ ನಾಶಕ್ಕೆ ಅವಕಾಶ ನೀಡಬಾರದು’ ಎಂದು ಕೋರಲಾಗಿತ್ತು.
‘ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದ್ದು, ಶವವನ್ನು ಸುಡುವುದಿಲ್ಲ, ಮಣ್ಣು ಮಾಡಲಾಗುವುದು’ ಎಂದು ಸರ್ಕಾರವು ತಿಳಿಸಿತ್ತು. ಅಧಿಕಾರಿಗಳ ಸಮ್ಮುಖದಲ್ಲಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶವವನ್ನು ಮಣ್ಣು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.