
ಹುಬ್ಬಳ್ಳಿ: ‘ಹಳೇಹುಬ್ಬಳ್ಳಿಯಂತಹ ಹಿಂದುಳಿದ ಪ್ರದೇಶದಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಸಿದ್ಧಾರೂಢಸ್ವಾಮಿ ಪ್ರೌಢಶಾಲೆಯ ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ₹5 ಲಕ್ಷ ಅನುದಾನ ನೀಡಲಾಗುವುದು’ ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಇಲ್ಲಿನ ಕಾರವಾರ ರಸ್ತೆಯ ಸಿದ್ಧಾರೂಢಸ್ವಾಮಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ದೇಶದ ಭವಿಷ್ಯ ಮಕ್ಕಳಲ್ಲಿ ಅಡಗಿದ್ದು, ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಶಿಕ್ಷಣ ಪಡೆದ ಮಕ್ಕಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು, ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಾರೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ‘ಪರಿಶ್ರಮದಿಂದ ಮಾತ್ರ ನಿಜವಾದ ಸಾಧನೆ ಹೊರಹೊಮ್ಮಲು ಸಾಧ್ಯ. ಹತ್ತನೇಯ ತರಗತಿಯ ವಿದ್ಯಾರ್ಥಿಗಳು ದೊಡ್ಡ ಕನಸನ್ನು ಕಂಡು, ನನಸಾಗಿಸಲು ಮುಂದಾಗಬೇಕು’ ಎಂದರು.
ಶಾಲಾ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾನಾಡಿದ ಡಿಸಿಪಿ ರವೀಶ ಸಿ.ಆರ್., ‘ವಿದ್ಯಾರ್ಥಿ ಬದುಕಲ್ಲಿ ಎದುರಾಗುವ ಬಡತನ, ಸಂಕಷ್ಟಗಳು ಎಂದಿಗೂ ಸಾಧನೆಗೆ ಅಡ್ಡಿಯಲ್ಲ. ಅವು ನಮ್ಮ ಬದುಕನ್ನು ಮತ್ತಷ್ಟು ಗಟ್ಟಿಯಾಗಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ’ ಎಂದು ಹೇಳಿದರು.
ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮುಖಂಡರಾದ ಅನಿಲಕುಮಾರ ಪಾಟೀಲ, ಅರ್ಜುನ ಪಾಟೀಲ ಅವರು, ಎಸ್. ಡಿ. ಮಧೂರಕರ, ಮೋಹನ ಗೌಡರ, ದಶರಥ ವಾಲಿ, ಅಬೀದಲಿ ಜೋಡಗೇರಿ, ಮೋಹನ ಹಿರೇಮನಿ, ಎಸ್.ಬಿ. ನಾಯಕ, ಎಸ್.ವಿ. ಚಂದರಗಿ, ಎಲ್.ಎಸ್. ಹೊಸಮನಿ, ಪ್ರಭು ತಳವಾರ, ಎಂ.ಬಿ. ಪಾಟೀಲ, ಆರ್. ಸಿ. ಸರ್ವಂದ, ಶ್ರೀನಿವಾಸ ವಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.