ADVERTISEMENT

ಹುಬ್ಬಳ್ಳಿ | ಸಂಚಾರ ಸಾಥಿ; ಸ್ವಾತಂತ್ರ್ಯಕ್ಕೆ ಅಡ್ಡಿ: ಡಿ. ಉಮಾಪತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:43 IST
Last Updated 3 ಡಿಸೆಂಬರ್ 2025, 6:43 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪತ್ರಕರ್ತ ಡಿ. ಉಮಾಪತಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪತ್ರಕರ್ತ ಡಿ. ಉಮಾಪತಿ ಮಾತನಾಡಿದರು   

ಹುಬ್ಬಳ್ಳಿ: ‘ಮೊಬೈಲ್‌ ಫೋನ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ನಮ್ಮ ರಾಷ್ಟ್ರದಲ್ಲಿ ಇದು ಕಳವಳ ಮೂಡಿಸಿದೆ’ ಎಂದು ಪತ್ರಕರ್ತ ಡಿ. ಉಮಾಪತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು,‘ಮೊಬೈಲ್‌ ಫೋನ್‌ ಕಳೆದರೆ, ಅದನ್ನು ಸಂಚಾರ ಸಾಥಿ ಆ್ಯಪ್‌ನಿಂದ ಪತ್ತೆ ಮಾಡಬಹುದು ಎನ್ನುತ್ತಾರೆ.  ಅದನ್ನು ಅಳವಡಿಸಿಕೊಂಡರೆ ಖಾಸಗಿ ವಿಷಯ ಮಾತನಾಡಲು ಆಗದು. ವೈಯಕ್ತಿಕ ಸ್ವಾತಂತ್ರ್ಯ ಇರುವುದಿಲ್ಲ’ ಎಂದರು.

‘ಪತ್ರಕರ್ತರು ಪತ್ರಿಕೆಗಳನ್ನು ಓದಿದರೆ ಮಾತ್ರ ಜ್ಞಾನದ ಹೆಚ್ಚುತ್ತದೆ. ಅವರಿಗೆ ಅದೇ ವಿಶ್ವವಿದ್ಯಾಲಯ. ಆದರೆ, ಈಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಬಂದ ವಿಷಯಗಳೇ ಮುಖ್ಯವಾಗಿ, ಸತ್ಯ ಮರೆಯಾಗುತ್ತಿದೆ. ಆಳುವವರನ್ನು ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿದೆ’ ಎಂದರು.

ADVERTISEMENT

ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕಟ್ಟಿಮನಿ, ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ನಿಕಟಪೂರ್ವ ಅಧ್ಯಕ್ಷ ಲೋಚನೇಶ ಹೂಗಾರ ಹಾಗೂ ಪತ್ರಕರ್ತ ಸುಶೀಲೇಂದ್ರ ಕುಂದರಗಿ ಇದ್ದರು.

‘ವಿಶ್ವಾಸ ಗಳಿಸುವುದೇ ಸವಾಲು’
‘ಈ ಹಿಂದೆ ಪತ್ರಿಕೆಯೇ ಮಾಧ್ಯಮವಾಗಿತ್ತು. ನಂತರ ಟಿವಿ ಬಂತು. ಈಗ ಡಿಜಿಟಲ್‌ ಜಗತ್ತಿನಲ್ಲಿ ಇದ್ದೇವೆ. ಮಾಧ್ಯಮದ ಸ್ವರೂಪ ಬದಲಾದಂತೆ ಹೊಸ ಸವಾಲುಗಳು ಎದುರಾಗುತ್ತಿವೆ. ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹತೆ ಗೌರವ ಇತ್ತು. ಈಗ ತಂತ್ರಜ್ಞಾನಗಳಿದ್ದರೂ ವಿಶ್ವಾಸ ಗಳಿಸುವುದು ಸವಾಲಾಗಿದೆ’ ಎಂದು ಪತ್ರಕರ್ತ ಸನತ್‌ಕುಮಾರ ಬೆಳಗಲಿ ಹೇಳಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ಸಂಘದ ರಾಜ್ಯ ಘಟಕದಲ್ಲಿ ₹1.36 ಕೋಟಿ ಠೇವಣಿಯಿದ್ದು ಅದನ್ನು ಪ್ರಸ್ತುತ ಅವಧಿಯಲ್ಲಿ ₹2 ಕೋಟಿಗೆ ಹೆಚ್ಚಿಸುವ ಗುರಿಯಿದೆ. ಅದರಿಂದ ಬರುವ ಬಡ್ಡಿ ಹಣವನ್ನು ಪತ್ರಕರ್ತರ ನೆರವಿಗೆ ನೀಡಲಾಗುವುದು. ಪತ್ರಕರ್ತರು ವೃತ್ತಿ ಜತೆಗೆ ಕುಟುಂಬ ಆರೋಗ್ಯದ ಕಾಳಜಿ ವಹಿಸಬೇಕು’ ಎಂದರು.