ಹುಬ್ಬಳ್ಳಿ: ಪೊಲೀಸರ ತಪ್ಪು ಗ್ರಹಿಕೆಯಿಂದ ಚುನಾವಣಾ ಮತಗಟ್ಟೆ ಏಜೆಂಟ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ನೇಕಾರನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ವಾರ್ಡ್ ನಂ. 80ರ ಅತಿಸೂಕ್ಷ್ಮ ಮೂರನೇ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಹಿರೇಮಠ ಪರ ಶಿವಯ್ಯ ಹಿರೇಮಠ ಏಜೆಂಟರಾಗಿ ನಿಯೋಜನೆಗೊಂಡಿದ್ದರು. ಅವರು ಹೊರಗಡೆ ಓಡಾಡುತ್ತಿರುವುದನ್ನು ಗಮನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಎಂ. ರಾಜನ್, 'ಹೀಗೆಲ್ಲ ಯಾಕೆ ಮತಗಟ್ಟೆಯಿಂದ ಹೊರಗಡೆ ಓಡಾಡುತ್ತೀರಿ. ಅದಕ್ಕೆ ಅವಕಾಶವಿಲ್ಲ' ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಆಕ್ರೋಶಗೊಂಡ ಏಜೆಂಟ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಚುನಾವಣಾಧಿಕಾರಿಗಳೇ ಏಜೆಂಟರಿಗೆ ಗುರುತು ಪತ್ರ ನೀಡುತ್ತಾರೆ. ಅದರ ಬಗ್ಗೆ ಮಾಹಿತಿಯೇ ಇಲ್ಲದ ಕೋಲಾರದಿಂದ ಬಂದ ಇನ್ಸ್ಪೆಕ್ಟರ್ ಕಿರಿಕಿರಿ ಮಾಡುತ್ತಿದ್ದಾರೆ' ಎಂದು ಜಯತೀರ್ಥ ಕಟ್ಟಿ ಆರೋಪಿಸಿದರು.
ಕೆಲಹೊತ್ತು ಪೊಲೀಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಅದೇ ವೇಳೆ ಚುನಾವಣಾಧಿಕಾರುಗಳು ಸ್ಥಳಕ್ಕೆ ಬಂದು, ಏಜೆಂಟ್ ಗುರುತು ಪತ್ರ ಪರಿಶೀಲಿಸಿ, ಪೊಲೀಸರಿಗೆ ತಿಳಿಹೇಳಿ ಸಮಸ್ಯೆ ಬಗೆಹರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.